ಮಡಿಕೇರಿ, ಜು. 21: ಕೊಲೆಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದ ಆರೋಪದಂತೆ ವ್ಯಕ್ತಿಯೋರ್ವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 12-12-2012ರಲ್ಲಿ ಮಾಂಸದ ವಿಚಾರದಲ್ಲಿ ತೋಳೂರು ಶೆಟ್ಟಳ್ಳಿಯ ಮಹೇಶ್ ಹಾಗೂ ಅವರ ಮನೆ ಸನಿಹದಲ್ಲೇ ಇದ್ದ ಮಾವ ನಿಂಗಯ್ಯ ಅವರ ನಡುವೆ ಕಲಹವೇರ್ಪಟ್ಟಿದೆ. ಈ ಸಂದರ್ಭ ಮಾವ ನಿಂಗಯ್ಯ ಮಹೇಶ್‍ನ ಮೇಲೆ ಕತ್ತಿಯಿಂದ ಪ್ರಹಾರ ನಡೆಸಿ ಕೊಲೆಗೈಯ್ಯಲು ಯತ್ನಿಸಿದ್ದಾಗಿ ಪೊಲೀಸ್ ದೂರು ದಾಖಲಾಗಿತ್ತು. ಈ ಬಗ್ಗೆ ಪೊಲೀಸರು ಆರೋಪಿ ನಿಂಗಯ್ಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಪವನೇಶ್ ಅವರು ನಿಂಗಯ್ಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 3 ವರ್ಷದ ಕಠಿಣ ಸಜೆ ಹಾಗೂ ರೂ. 5 ಸಾವಿರ ದಂಡ ವಿಧಿಸಿದ್ದಾರೆ. ಸರಕಾರದ ಪರ ಸರಕಾರಿ ಅಭಿಯೋಜಕರಾದ ಎಂ. ಕೃಷ್ಣವೇಣಿ ವಾದಿಸಿದ್ದರು.