ಶ್ರೀಮಂಗಲ, ಜ. 18: ಬೆಕ್ಕೆಸೊಡ್ಲೂರು ಗ್ರಾಮದ ಲಕ್ಷ್ಮಣ ತೀರ್ಥ ನದಿ ದಡದ ಕುರುಚಲು ಕಾಡಿನಲ್ಲಿ ಹುಲಿಯೊಂದು ಉರುಳಿಗೆ ಸಿಲುಕಿದ್ದು, ಹುಲಿಯನ್ನು ಅರಣ್ಯ ಇಲಾಖೆ ವತಿಯಿಂದ ಸುರಕ್ಷಿತವಾಗಿ ಬಿಡಿಸಿ ಮೈಸೂರು ಮೃಗಾಲಯಕ್ಕೆ ಸಾಗಿಸಲಾಗಿದೆ. ಗ್ರಾಮದ ಶ್ರೀ ಮಂದತವ್ವ ದೇವಸ್ಥಾನಕ್ಕೆ ಹೋಗುವ ಮಾರ್ಗದ ನದಿ ದಡದಲ್ಲಿ ಪ್ರಾಣಿಗಳು ನಿರಂತರವಾಗಿ ಸಂಚರಿಸುವ ಮಾರ್ಗದಲ್ಲಿ ಕಾಡು ಹಂದಿ ಹಿಡಿಯಲು ಉರುಳನ್ನು ಹಾಕಲಾಗಿತ್ತು. ಈ ಉರುಳಿಗೆ ಹುಲಿಯ ಎಡ ಕೈ ಸಿಲುಕಿಕೊಂಡು ಅಲ್ಲಿಯೇ ಕುರುಚಲು ಕಾಡಿನೊಳಗೆ ನರಳಾಡುತ್ತಾ ಬಿದ್ದಿತ್ತು. ಇದನ್ನು ಕಂಡ ಸ್ಥಳೀಯರು ಇಂದು ಬೆಳಿಗ್ಗೆ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸ್ವಯಂ ಸೇವಾ ಸಂಘಗಳಿಗೆ ಮಾಹಿತಿ ನೀಡಿದರು. ಸಿಕ್ಕಿ ಹಾಕಿಕೊಂಡ ಹುಲಿ ಸುಮಾರು 4 ವರ್ಷದ ಗಂಡು ಹುಲಿಯಾಗಿದ್ದು, ಉರುಳಿಗೆ ಸಿಲುಕಿದ ಎಡಕೈಗೆ ಸ್ವಲ್ಪ ಪ್ರಮಾಣದ ಗಾಯವಾಗಿದೆ.

ಡಿ.ಎಫ್.ಓ. ಎಂ.ಎಂ. ಜಯಾ, ಪೊನ್ನಂಪೇಟೆ ಆರ್.ಎಫ್.ಒ. ಪಿ.ಬಿ.ಉತ್ತಯ್ಯ, ಮತ್ತಿಗೋಡು ಆರ್.ಎಫ್.ಒ ಕಿರಣ್ ಕುಮಾರ್, ಕೂರ್ಗ್ ವೈಲ್ಡ್ ಲೈಪ್ ಸೊಸೈಟಿಯ ಕುಂಞಂಗಡ ಬೋಸ್ ಮಾದಪ್ಪ, ವೈಲ್ಡ್ ಲೈಪ್ ಟ್ರಸ್ಟ್ ಆಫ್ ಇಂಡಿಯಾ (ಡಬ್ಲ್ಯು.ಎಲ್.ಟಿ.ಐ) ಮತ್ತು ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸಿ. ಜಯರಾಂ ತಂಡ ಸ್ಥಳಕ್ಕೆ ದೌಡಾಯಿಸಿತು.

ಉರುಳಿಗೆ ಸಿಲುಕಿದ ಹುಲಿಯನ್ನು ಬಿಡಿಸಲು ಸಾಧ್ಯವಾಗಲಿಲ್ಲ. ಅರವಳಿಕೆ ನೀಡಲು ಅನುಮತಿ ಅಗತ್ಯವಾದುದರಿಂದ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಜೆ. ಹೊಸಮಠ್ ಅವರನ್ನು ಸಂಪರ್ಕಿಸಲಾಯಿತು. ಅನುಮತಿ ದೊರೆತ ಬಳಿಕ ಮೈಸೂರು ಮೃಗಾಲಯದಿಂದ ಪಶುವೈದ್ಯರುಗಳಾದ ಮದನ್ ಹಾಗೂ ನಾಗರಾಜ್ ಆಗಮಿಸಿ ಹುಲಿಗೆ ಅರವಳಿಕೆ ಮದ್ದು ನೀಡಿದರು.

ಹುಲಿಯ ಎಡ ಮುಂಗೈಗೆ ಗಾಯವಾಗಿರುವದರಿಂದ ಸಂಜೆವೇಳೆ ಅದನ್ನು ಮೈಸೂರು ಮೃಗಾಲಯಕ್ಕೆ ಸಾಗಿಸಲಾಯಿತು. ಹುಲಿಯ ಆರೋಗ್ಯ ಸುಧಾರಿಸಿದ ಕೂಡಲೆ ಅದನ್ನು ಅರಣ್ಯಕ್ಕೆ ಬಿಡಲಾಗುವದೆಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ‘ಶಕ್ತಿ’ಗೆ ತಿಳಿಸಿದರು. ಬೆಕ್ಕೆಸೊಡ್ಲೂರು ವಿಭಾಗದಲ್ಲಿ ಹುಲಿಯ ಓಡಾಟದ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದು, ಇಂದು ಸೆರೆಯಾದ ಹುಲಿ ಅದಾಗಿರಲಿಕ್ಕಿಲ್ಲ ಎಂದು ಮನೋಜ್ ಕುಮಾರ್ ಹೇಳಿದರು. ಈ ಹುಲಿಗೆ 3.5 ರಿಂದ 4 ವರ್ಷಗಳಾಗಿದ್ದು, ಗ್ರಾಮಸ್ಥರು ಕಂಡ ಹುಲಿ ಬಹುಶಃ ದೊಡ್ಡದಿದೆ ಎಂದರು. ಈ ಹುಲಿ ನಾಗರಹೊಳೆ ವಲಯದಿಂದ ತಪ್ಪಿಸಿಕೊಂಡು ಬಂದು ಸಿಕ್ಕಿಬಿದ್ದಿದೆ ಎಂದರು.