ಮಡಿಕೇರಿ, ಸೆ. 8: ನೆರೆಯ ಕೇರಳ ಜಿಲ್ಲೆಯ ಕಾಸರಗೋಡುವಿನ ಚೆರ್ಕಳ ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಜಿಲ್ಲೆಯ ಮಹಿಳೆಯೋರ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇಲ್ಲಿಗೆ ಸನಿಹದ ಮಕ್ಕಂದೂರು ಗ್ರಾಮ ನಿವಾಸಿ, ದಿ. ಮಹಮ್ಮದ್ ಎಂಬವರ ಪತ್ನಿ ಮರಿಯಮ್ಮ (60) ಎಂಬವರು ತಮ್ಮ ತಂಗಿಯ ಮಗಳ ಮನೆಗೆಂದು ಚೆರ್ಕಳಕ್ಕೆ ತೆರಳಿದ್ದರು. ಚೆರ್ಕಳದಲ್ಲಿ ಬಸ್ ಇಳಿದ ಸಂದರ್ಭ ಒಮ್ಮೆಲೆ ಬಸ್ ಹಿಂದಕ್ಕೆ ಚಲಿಸಿ ಮರಿಯಮ್ಮ ಅವರ ಮೇಲೆ ಹರಿದಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ಅಲ್ಲಿನ ಪೊಲೀಸರು ಕಾಸರಗೋಡು ಆಸ್ಪತ್ರೆಗೆ ದಾಖಲಿಸಿದರಾದರೂ ಅಲ್ಲಿನ ವೈದ್ಯರು ಮಂಗಳೂರು ಆಸ್ಪತ್ರೆಗೆ ಶಿಫಾರಸು ಮಾಡಿದ್ದರು.

ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮರಿಯಮ್ಮ ಮೃತಪಟ್ಟಿದ್ದಾರೆ. ಅಂತ್ಯಕ್ರಿಯೆ ತಾ. 9 ರಂದು (ಇಂದು) ಮಡಿಕೇರಿಯ ಈದ್ಗಾ ಮೈದಾನದಲ್ಲಿ ನಡೆಯಲಿದೆ. ಮೃತರು ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.