ಕುಶಾಲನಗರ, ಅ. 30: 4ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ.ಜಿ.ಚಿನ್ನಸ್ವಾಮಿ ನೇತೃತ್ವದ ತಂಡ ಕುಶಾಲನಗರ ಪಟ್ಟಣ ಪಂಚಾಯ್ತಿಗೆ ಭೇಟಿ ನೀಡಿ ಪಂಚಾಯ್ತಿ ಆಡಳಿತ ಮಂಡಳಿಯೊಂದಿಗೆ ಸಮಾಲೋಚನೆ ನಡೆಸಿತು.ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕಾವೇರಿ ನದಿ ಕಲುಷಿತಗೊಳ್ಳುತ್ತಿದ್ದು ನದಿ ತಟಗಳ ಸ್ವಚ್ಛತೆ ಹಾಗೂ ಸಮರ್ಪಕ ನಿರ್ವಹಣೆ ಮೂಲಕ ನದಿ ಸಂರಕ್ಷಣೆಗೆ ವಿಶೇಷ ಅನುದಾನ ಕಲ್ಪಿಸುವಂತೆ ಪಟ್ಟಣ ಪಂಚಾಯ್ತಿ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಡಿ.ಕೆ.ತಿಮ್ಮಪ್ಪ ಮನವಿ ಮಾಡಿದರು. ರಾಜ್ಯಮಟ್ಟದಲ್ಲಿ ವಿಶೇಷ ಯೋಜನೆ ರೂಪಿಸಿ ನದಿ ದಂಡೆಯ ಗ್ರಾಮ ಪಂಚಾಯ್ತಿಗಳಿಗೆ ಅನುದಾನ ಕಲ್ಪಿಸುವ ಮೂಲಕ ನದಿ ತಟಗಳ ನಿರ್ವಹಣೆ ಹಾಗೂ ಸಂರಕ್ಷಣೆಗೆ ಅನುದಾನ ಕಲ್ಪಿಸಲು ಕೋರಿದರು.

ಪಟ್ಟಣದಲ್ಲಿ ಸಂಗ್ರಹವಾಗುವ ಕಸ, ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಸೂಕ್ತ ಸ್ಥಳಾವಕಾಶದ ಅಗತ್ಯತೆಯಿರುವ ಬಗ್ಗೆ ಸದಸ್ಯ ಹೆಚ್.ಜೆ.ಕರಿಯಪ್ಪ ವಿಷಯ ಪ್ರಸ್ತಾಪಿಸಿದರು. ಕಸ ಸಂಗ್ರಹಣೆಗೆ ಟಿಪ್ಪರ್ ಖರೀದಿಸಲು ಅನುದಾನ ಕಲ್ಪಿಸಲು ಆಗ್ರಹಿಸಿದರು.