ಮಡಿಕೇರಿ, ಮೇ 21: ವಾರದ ಹಿಂದೆ ಸುರಿದ ಗಾಳಿ-ಮಳೆಯ ಅವಾಂತರಕ್ಕೆ ಮರದ ಕೊಂಬೆ ಬಿದ್ದು ವಿದ್ಯುತ್ ಕಂಬ ತುಂಡರಿಸಿದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡು ಮಕ್ಕಳ ಈಜು ಕಲಿಕಾ ಶಿಬಿರ ಸ್ಥಗಿತಗೊಂಡಿದೆ. ಅಲ್ಲಲ್ಲಿ ವಿದ್ಯುತ್ ಕಂಬ-ತಂತಿಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಸಂಪರ್ಕ ಕಲ್ಪಿಸಲು ವಿಳಂಬವಾದ ಹಿನ್ನೆಲೆ ಯಲ್ಲಿ ಒಂದು ತಿಂಗಳ ಅವಧಿಯ ಬೇಸಿಗೆ ಶಿಬಿರದಲ್ಲಿ ಒಂದು ವಾರ ಕಡಿತಗೊಂಡಂತಾಗಿದೆ.

ಇಲ್ಲಿನ ಜಿಲ್ಲಾ ಕ್ರೀಡಾಂಗಣ ಬಳಿ ಇರುವ ಈಜು ಕೊಳದಲ್ಲಿ ಮೇ 1 ರಿಂದ 31ರ ವರೆಗೆ ಮಕ್ಕಳ ಬೇಸಿಗೆ ಈಜು ತರಬೇತಿ ಶಿಬಿರ ಆಯೋಜಿಸಲಾಗಿದೆ. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಆಯೋಜಿತ ವಾಗಿರುವ ಶಿಬಿರದಲ್ಲಿ ರೂ. 2,800 ಶುಲ್ಕ ಪಾವತಿಸಿ 35ಕ್ಕೂ ಅಧಿಕ ಮಕ್ಕಳು ನೊಂದಾಯಿಸಿಕೊಂಡಿದ್ದಾರೆ. ಆದರೆ ವಾರದ ಹಿಂದೆ ಸುರಿದ ಮಳೆಗೆ ಸ್ಕೌಟ್ ಮತ್ತು ಗೈಡ್ಸ್ ಆವರಣದಲ್ಲಿರುವ ಅತ್ತಿ ಮರದ ಕೊಂಬೆ ಬಿದ್ದು ವಿದ್ಯುತ್ ಕಂಬ ಮುರಿದು ಹೋದ ಹಿನ್ನೆಲೆಯಲ್ಲಿ ಈಜು ಕೊಳಕ್ಕೆ ವಿದ್ಯುತ್ ಕಡಿತಗೊಂಡಿದೆ. ಕಂಬದ ಅವಶ್ಯಕತೆ ಹಾಗೂ ಸಿಬ್ಬಂದಿ ಕೊರತೆಯಿಂದ ಸಂಪರ್ಕ ಕಲ್ಪಿಸಲು ವಿಳಂಬವಾಗಿದೆ. ವಿದ್ಯುತ್ ಇಲ್ಲದ ಕಾರಣ ಒಂದು ವಾರದಿಂದ ಇಲಾಖೆ ತರಬೇತಿ ನೀಡುವದನ್ನು ಸ್ಥಗಿತಗೊಳಿಸಿದೆ. ಈ ಬಗ್ಗೆ ಶಿಬಿರಾರ್ಥಿಗಳ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ತಿಂಗಳಾವಧಿಯಲ್ಲಿ ಒಂದು ವಾರ ಕಳೆದು ಹೋಗಿದೆ. ಇನ್ನಿರುವದು ಕೇವಲ ಒಂದು ವಾರಗಳು ಮಾತ್ರ. ಶಿಬಿರದಿಂದ ಏನೂ ಪ್ರಯೋಜನವಿಲ್ಲದಂತಾಗಿದೆ ಎಂದು ದೂರಿಕೊಂಡಿದ್ದಾರೆ. ಸರಕಾರಿ ಇಲಾಖೆಯ ಈಜುಕೊಳವಾಗಿದ್ದು, ಬೇಗನೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬಹುದಿತ್ತು. ಕನಿಷ್ಟ ಜನರೇಟರ್ ವ್ಯವಸ್ಥೆಯಾದರೂ ಮಾಡಬೇಕಿತ್ತು ಎಂದು ಅಸಮಾಧಾನ ಹೊರಗೆಡಹಿದ್ದಾರೆ. ಈ ನಡುವೆ ಇಂದು ಸೆಸ್ಕ್ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡುತ್ತಿರುವದು ಕಂಡುಬಂದಿತು.

ಕೊಳದ ಅವ್ಯವಸ್ಥೆ

ರೂ. 2.7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈಜು ಕೊಳದಲ್ಲಿ ಕೆಲವೊಂದು ಲೋಪ ದೋಷಗಳು ಕಂಡು ಬಂದಿವೆ. ಒಳಾಂಗಣ ಈಜು ಕೊಳವಾಗಿರುವ ದರಿಂದ ಮೇಲ್ಛಾವಣಿಯನ್ನು ಸರಿಯಾದ ರೀತಿಯಲ್ಲಿ ಅಳವಡಿಸದೇ ಇರುವದರಿಂದ ಮೇಲಿನಿಂದ ಮರದ ಎಲೆಗಳು, ಕಸ-ಕಡ್ಡಿ, ಧೂಳುಗಳು ನೀರಿಗೆ ಬೀಳುತ್ತಿರುವದು ಗೋಚರಿಸಿದೆ. ಕೊಳದ ಅಡಿ ಭಾಗದಲ್ಲಿ ಅಳವಡಿಸಲಾಗಿರುವ ‘ಟೈಲ್ಸ್’ ಅಲ್ಲಲ್ಲಿ ಕಿತ್ತು ಹೋಗಿದೆ. ಪುರುಷರ ಬಟ್ಟೆ ಬದಲಾಯಿಸುವ ಸ್ಥಳದಲ್ಲಿ ಶೌಚಾಲಯದಲ್ಲಿ ‘ಬೇಸಿನ್’ ಅನ್ನು ಎತ್ತರದಲ್ಲಿ ಅಳವಡಿಸಿರುವ ದರಿಂದ ಮಕ್ಕಳಿಗೆ ಮೂತ್ರ ವಿಸರ್ಜನೆ ಮಾಡಲು ಅನಾನುಕೂಲವಾಗುತ್ತಿದೆ. ಮಕ್ಕಳು ನೆಲ ಹಾಸಿಗೆಗೆ ಮೂತ್ರ ಮಾಡುವದರಿಂದ ನೆಲದಮೇಲೆಲ್ಲ ಮೂತ್ರ ಹರಿದು ‘ಶವರ್ ಬಾತ್’ ಮಾಡಿ ಕೊಳದ ಬಳಿ ತೆರಳುವವರು ತುಳಿದುಕೊಂಡೇ ಹೋಗ ಬೇಕಾದಂತಹ ಪರಿಸ್ಥಿತಿ ಇದೆ.

ಮಕ್ಕಳಿಗೆ ಅನುಕೂಲವಾಗುವಂತೆ ಸಿಬ್ಬಂದಿಗಳು ಕಲ್ಲೊಂದನ್ನು ಇರಿಸಿದ್ದಾರಾದರೂ ಹೆಚ್ಚಿಗೆ ಮಕ್ಕಳು ಬಂದಾಗ ಕಷ್ಟಸಾಧ್ಯವಾಗುತ್ತದೆ. ಇದರಿಂದಾಗಿ ಅಲ್ಲಿ ಗಬ್ಬು ವಾಸನೆ ಹರಡಿದೆ. ಮಕ್ಕಳಿಗೆ ಅನುಕೂಲ ವಾಗುವಂತೆ ಶೌಚದ ವ್ಯವಸ್ಥೆ ಯಾಗಬೇಕಿದೆ.

ನಿರ್ಮಿತಿ ಕೇಂದ್ರ ಕಾಮಗಾರಿ ಯನ್ನು ನಿರ್ವಹಿಸಿದ್ದು, ಈ ಎಲ್ಲ ಅನಾನುಕೂಲತೆಗಳಿರುವದರಿಂದ ಕ್ರೀಡಾ ಇಲಾಖೆ ಇನ್ನೂ ಕೂಡ ತನ್ನ ಸುಪರ್ದಿಗೆ ಪಡೆದುಕೊಂಡಿಲ್ಲ. ಆದರೂ ಕೊಳದ ನಿರ್ವಹಣೆಯನ್ನು