ಶನಿವಾರಸಂತೆ, ಮೇ 11: ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿ ಫ್ರಾನ್ಸಿಸ್ ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ನಿಡ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಸ್ತಾಫ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಒಡೆಯನಪುರ ಗ್ರಾಮದ ರಾಜ್ಯ ಹೆದ್ದಾರಿಯ ಸಮೀಪದಲ್ಲಿ 4 ಎಕರೆ ಜಾಗವನ್ನು ನಿರಾಶ್ರಿತರಾದ ಹಾಸನದ ರಮೇಶ್ ಎಂಬವರಿಗೆ ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದು ಗ್ರಾಮಸ್ಥರೊಂದಿಗೆ ನಿರಾಕರಿಸಿದ ಕಾರಣ, ಫ್ರಾನ್ಸಿಸ್ ಅವರು ದೂರವಾಣಿ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒಡೆಯನಪುರ ಗ್ರಾಮಸ್ಥರು ಪಂಚಾಯಿತಿ ಸದಸ್ಯರು ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದರು. ಠಾಣಾಧಿಕಾರಿ ಎಸ್.ಎಸ್. ರವಿಕಿರಣ್ ದೂರು ದಾಖಲಿಸಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಯಶೋಧ, ನಳಿನಿ, ವಿಜಯ್, ಅಶೋಕ್, ಮಾಜಿ ಅಧ್ಯಕ್ಷ ಜಿ.ಎಂ. ಹಮೀದ್, ಗ್ರಾಮಸ್ಥರಾದ ಕಲ್ಯಾಣಿ, ಸರೋಜ, ಫಾತಿಮ, ಉಸ್ಮಾನ್, ಅಮೀನ, ದಯಾನಂದ ಹಾಗೂ ಇತರರು ಉಪಸ್ಥಿತರಿದ್ದರು.