ಮಡಿಕೇರಿ, ಸೆ. 30: ಚೇರಂಬಾಣೆಯ ಬೇಂಗ್‍ನಾಡ್ ಕೊಡವ ಸಮಾಜದಲ್ಲಿ ಕೈಲ್ ಮುಹೂರ್ತ ಹಬ್ಬದ ಸಂತೋಷ ಕೂಟ ನಡೆಯಿತು.ಕ್ರೀಡಾಕೂಟವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಉಪನ್ಯಾಸಕ ಅಯ್ಯಂಡ ರಾಮಕೃಷ್ಣ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿದರು. ಸಾರ್ವಜನಿಕರಿಗೆ ಭಾರದ ಗುಂಡು ಎಸೆತ, ತೆಂಗಿನ ಕಾಯಿಗೆ ಗುಂಡು ಹೊಡೆಯುವದು ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ತೇಲಪಂಡ ಶಂಭು ಅಪ್ಪಯ್ಯ ಪ್ರಥಮ, ಕಬ್ಬಚಿರ ಪ್ರಜ್ವಲ್ ದ್ವಿತೀಯ ಸ್ಥಾನವನ್ನು ಪಡೆದರು.

ಸಭಾ ಕಾರ್ಯಕ್ರಮವು ಸಮಾಜದ ಅಧ್ಯಕ್ಷ ಕುಟ್ಟೇಟಿರ ಕುಂಞಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಪೂನಾದ ಟಾಟಾ ಮೋಟಾರ್ಸ್‍ನ ನಿವೃತ್ತ ವ್ಯವಸ್ಥಾಪಕ ಸೋಮೆಯಂಡ ಮೇದಪ್ಪ ಕಾರ್ಯಪ್ಪ, ನಾಪೋಕ್ಲು ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಅಯ್ಯಂಡ ರಾಮಕೃಷ್ಣ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೇಕಡ ದೇವಯ್ಯ ಭಾಗವಹಿಸಿದ್ದರು. ಅಧಿಕ ಸಂಖ್ಯೆಯಲ್ಲಿ ಸಮಾಜದ ಸದಸ್ಯರು ಆಗಮಿಸಿದ್ದರು. ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.