ಕುಶಾಲನಗರ, ಆ. 9: ಕುಶಾಲನಗರ ದೇವಾಲಯಗಳ ಆಡಳಿತ ಮಂಡಳಿಯ ಒಕ್ಕೂಟದ ಅಧ್ಯಕ್ಷರಾಗಿ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಸೇವಾ ಟ್ರಸ್ಟ್‍ನ ಕೆ.ಆರ್. ಶಿವನ್ ಆಯ್ಕೆಯಾಗಿದ್ದಾರೆ. ಕುಶಾಲನಗರ ರಥಬೀದಿಯ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಚೌಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಡಿ.ಟಿ. ವಿಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಸ್ಥಳೀಯ ದೇವಾಲಯಗಳ ಆಡಳಿತ ಮಂಡಳಿ ಪ್ರಮುಖರ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಬಸವೇಶ್ವರ ದೇವಾಲಯ ಸಮಿತಿಯ ಎಂ.ಎಸ್. ಶಿವಾನಂದ, ಪ್ರಧಾನ ಕಾರ್ಯದರ್ಶಿಯಾಗಿ ಚೌಡೇಶ್ವರಿ ದೇವಾಲಯ ಸಮಿತಿ ಡಿ.ವಿ. ರಾಜೇಶ್, ಜಂಟಿ ಕಾರ್ಯದರ್ಶಿ ಯಾಗಿ ಮುತ್ತಪ್ಪ ದೇವಾಲಯದ ಕೆ.ಕೆ. ದಿನೇಶ್ ಕುಮಾರ್, ಖಜಾಂಚಿಯಾಗಿ ಆಂಜನೇಯ ದೇವಾಲಯದ ವಿ.ಡಿ. ಪುಂಡರೀಕಾಕ್ಷ ಆಯ್ಕೆಯಾಗಿದ್ದಾರೆ.

ಈ ಸಂದರ್ಭ ಉಪಸ್ಥಿತರಿದ್ದ ಶ್ರೀ ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಿ.ಎನ್. ವಸಂತ ಕುಮಾರ್ ಮಾತನಾಡಿ, ದೇವಾಲಯ ಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪರಸ್ಪರ ಪಾಲ್ಗೊಂಡು ಉತ್ತಮ ಬಾಂಧವ್ಯ ಬೆಳೆಸುವದರೊಂದಿಗೆ ಸಮಾಜದಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದರು. ಈ ಸಂದರ್ಭ ಕಾರ್ಯಕ್ರಮ ಆಯೋಜಕ ಡಿ.ಆರ್. ಸೋಮಶೇಖರ್ ಸೇರಿದಂತೆ ಕುಶಾಲನಗರ ವ್ಯಾಪ್ತಿಯ 15 ಕ್ಕೂ ಅಧಿಕ ದೇವಾಲಯಗಳ ಆಡಳಿತ ಮಂಡಳಿಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.