ಸಿದ್ದಾಪುರ, ನ. 28: ಕೇಂದ್ರ ಸರಕಾರದ ಹಳೇ ನೋಟು ರದ್ದತಿಯಿಂದ ಸಾಮಾನ್ಯ ಜನರು ತೊಂದರೆಗೆ ಸಿಲುಕಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಸಿ.ಪಿ.ಐ. (ಎಂ) ಪ್ರತಿಭಟನೆ ನಡೆಸಿತು.

ಇಲ್ಲಿನ ಅಂಚೆ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದ ಪಕ್ಷದ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಮಾತನಾಡಿದ ಪಿ.ಆರ್.ಭರತ್, ವಿಜಯ ಮಲ್ಯ ಸೇರಿದಂತೆ ಕಾರ್ಪೊರೇಟ್ ಕಂಪೆನಿಯವರ ಸಾಲ ಮನ್ನಾ ಮಾಡಿರುವ ಸರಕಾರ ಬಡವರ ಹಾಗೂ ರೈತರ ಸಾಲ ಮನ್ನಾ ಮಾಡಲಿ. ಹಳೇ ನೋಟು ರದ್ದತಿಯಿಂದಾಗಿ ಜನಸಾಮಾನ್ಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಡಿ. 30ರವರೆಗೆ 500 ಹಾಗೂ 1000 ರೂ ಚಲಾವಣೆಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಕಾರ್ಮಿಕ ಮುಖಂಡ ಎನ್.ಡಿ. ಕುಟ್ಟಪ್ಪ, ಗ್ರಾಮ ಸಮಿತಿ ಕಾರ್ಯದರ್ಶಿ ಬೈಜು, ಮುಖಂಡರಾದ ಮುಸ್ತಫ, ರಾಮನ್‍ಕುಟ್ಟಿ ಇನ್ನಿತರರು ಇದ್ದರು.