ಸೋಮವಾರಪೇಟೆ, ಆ. 20: ಸಾಮಾಜಿಕ ಬದಲಾವಣೆ ಹಾಗೂ ಆರ್ಥಿಕವಾಗಿ ತಮ್ಮ ವೃತ್ತಿ, ವ್ಯಾಪಾರ, ವಹಿವಾಟುಗಳಲ್ಲಿ ಪ್ರಗತಿ ಸಾಧಿಸಿರುವ ಬಂಟ ಸಮುದಾಯದವರು ಇನ್ನಷ್ಟು ಬಲಿಷ್ಠವಾಗಬೇಕಿದೆ ಎಂದು ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ನಾರಾಯಣ ರೈ ಹೇಳಿದರು.ಸೋಮವಾರಪೇಟೆ ತಾಲೂಕು ಬಂಟರ ಯಾನೆ ನಾಡವರ ಸಂಘದ ಆಶ್ರಯದಲ್ಲಿ ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆದ ಪ್ರಥಮ ವರ್ಷದ “ಆಟಿಟೊಂಜಿ ಸಂಭ್ರಮ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಬಂಟ ಸಮುದಾಯದಲ್ಲಿ ಇಂದಿಗೂ ಕೃಷಿ ಚಟುವಟಿಕೆಗೆ ವಿಶೇಷ ಪ್ರಾಧಾನ್ಯತೆ ಇದೆ. ಹೆಣ್ಣು ಮಕ್ಕಳಿಗೆ ತವರಿನಲ್ಲಿ ಹೆಚ್ಚಿನ ಗೌರವ ಸಲ್ಲುತ್ತದೆ. ಆಟಿ ಮಾಸದಲ್ಲಿ ವಿಶೇಷ ಖಾದ್ಯ, ವಿವಿಧ ರುಚಿಯ ಭಕ್ಷ್ಯ ಭೋಜನಗಳನ್ನು ತಯಾರಿಸುವದರೊಂದಿಗೆ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಇಂದಿಗೂ ನಡೆಸುತ್ತಿರುವದು ಶ್ಲಾಘನೀಯ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಸಂಘದ ಅಧ್ಯಕ್ಷ ಬಿ.ಆರ್. ಕೃಷ್ಣಪ್ಪ ಶೆಟ್ಟಿ ಮಾತನಾಡಿ, ಬಂಟರ ಸಮುದಾಯ ತಮ್ಮದೇ ಆದ ವಿಶೇಷ ಸಂಸ್ಕøತಿಯನ್ನು ಹೊಂದಿರುವದರಿಂದ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ ಎಂದರು. ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಐತಪ್ಪ ಶೆಟ್ಟಿ, ಜಿಲ್ಲಾ ಭಂಟರ ಸಂಘ ಕಾರ್ಯದರ್ಶಿ ಹರೀಶ್ ರೈ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ರೈ, ಪದಾಧಿಕಾರಿಗಳಾದ ರಾಜಶೇಖರ್ ರೈ, ಮಂಜುನಾಥ್ ಚೌಟ ಮತ್ತಿತರರು ಉಪಸ್ಥಿತರಿದ್ದರು. ಅಕ್ಷತಾ ಶೆಟ್ಟಿ, ಪ್ರಾರ್ಥಿಸಿ, ಶಶಿಕಲಾ ಚೌಟ ಸ್ವಾಗತಿಸಿ, ಕರಿಯಪ್ಪ ರೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಾಲಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಮಾಜ ಬಾಂಧವರಿಗೆ ಹಗ್ಗಜಗ್ಗಾಟ, ಮೊಸರು ಕುಡಿಕೆ ಒಡೆಯುವದು, ಸಂಗೀತ ಕುರ್ಚಿ, ನಿಂಬೆ ಹಣ್ಣಿನ ಓಟ, ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.