ಮೂರ್ನಾಡು, ಅ. 18: ಕಾವೇರಿ ನದಿ ತೀರದ ಪವಿತ್ರ ಯಾತ್ರಾ ಸ್ಥಳವಾದ ಬಲಮುರಿಯಲ್ಲಿ ಅಗಸ್ತ್ಯೇಶ್ವರ ಹಾಗೂ ಕಾವೇರಿ ಕಣ್ವಮುನೀಶ್ವರ ದೇವಾಲಯದಲ್ಲಿ ತುಲಾ ಸಂಕ್ರಮಣದ ವಿಶೇಷ ಪೂಜಾ ಕಾರ್ಯಗಳು ಮಂಗಳವಾರ ಜರುಗಿತು.ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವದ ಮರುದಿನ ಪ್ರತಿವರ್ಷ ವಿಶೇಷ ಪೂಜೆ ಗಳೊಂದಿಗೆ ಜಾತ್ರೆ ನಡೆಯುತ್ತದೆ. ಈ ಬಾರಿಯೂ ಅಗಸ್ತ್ಯೇಶ್ವರ ದೇವಾಲಯದಲ್ಲಿ ಬೆಳಗ್ಗೆ 5 ಗಂಟೆಯಿಂದ ಅರ್ಚಕÀ ಚಂದ್ರಶೇಖರ್ ಐತಾಳ್ ಅವರ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದವು. ದೇವರಿಗೆ ಕರ್ಪೂರಾರತಿ, ರುದ್ರಾಭಿಷೇಕ, ಕುಂಕುಮಾರ್ಚನೆ, ಮಹಾಪೂಜೆಗಳು ನಡೆದವು. ಬಳಿಕ ಭಕ್ತಾದಿಗಳು ತೀರ್ಥ ಪ್ರಸಾದ ಸ್ವೀಕರಿಸಿದರು.

ಕಾವೇರಿ ನದಿಯ ಎಡಭಾಗದಲ್ಲಿರುವ ಕಾವೇರಿ ಕಣ್ವ ಮುನೀಶ್ವರ ದೇವಾಲಯದಲ್ಲಿ ಬೆಳಿಗ್ಗೆಯಿಂದ ಪೂಜಾ ಕಾರ್ಯ ಕ್ರಮಗಳು ಪ್ರಾರಂಭಗೊಂಡು ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಮೊದಲು ಕಾವೇರಿ ಕಣ್ವ ಮುನೀಶ್ವರ ದೇವಾಲಯಕ್ಕೆ ಸಾಗಿ ಹಣ್ಣುಕಾಯಿ ಪೂಜೆ ಸಲ್ಲಿಸಿ ಅಲ್ಲಿಂದ ಅಗಸ್ತ್ಯೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವದು ಕಂಡುಬಂತು.

ಬಲಮುರಿ, ಮೂರ್ನಾಡು, ಪಾರಾಣೆ, ಬೇತ್ರಿ, ಹೊದ್ದೂರು, ನಾಪೋಕ್ಲು, ಕೊಂಡಂಗೇರಿ ಸುತ್ತಮುತ್ತಲು ಗ್ರಾಮಗಳಿಂದ ಭಕ್ತರು ಆಗಮಿಸಿದರು. ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಗೆ ತೆರಳಲು ಸಾಧ್ಯವಾಗದ ಭಕ್ತರು ಬಲಮುರಿಗೆ ಬಂದು ಕಾವೇರಿ ತೀರ್ಥಸ್ನಾನ ಮಾಡಿ ಪುನೀತರಾಗಿ ತೆರಳಿದರು. ಕಾವೇರಿ ನದಿಯ ತೀರದಲ್ಲಿ ಕೇಶ ಮುಂಡನ ಮೃತಪಟ್ಟವರಿಗೆ ಪಿಂಡಾರ್ಪಣೆ ಕಾರ್ಯಗಳು ನಡೆದವು.

ಅಪಾರ ಸಂಖ್ಯೆಯ ಭಕ್ತಾದಿಗಳು: ಪ್ರತಿವರ್ಷಕ್ಕಿಂತ ಈ ಬಾರಿ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರ ಸಂಖ್ಯೆ ಅಧಿಕವಾಗಿತ್ತು. ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಭಕ್ತಾದಿಗಳು ದೇವಾಲಯಕ್ಕೆ ಬಂದು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಆವರಣದ ಹೊರಭಾಗಗಳಲ್ಲಿ ಆಟದ ಸಾಮಗ್ರಿ ಮಳಿಗೆಗಳು, ತಿಂಡಿತಿನಿಸುಗಳ ವ್ಯಾಪಾರ ಭರದಿಂದ ಸಾಗಿತ್ತು. ಮಧ್ಯಾಹ್ನ ನೆರೆದ ಭಕ್ತಾದಿಗಳಿಗೆ ಬಲಮುರಿ ಗ್ರಾಮದ ಪೇರಿಯಂಡ ಪೆಮ್ಮಯ್ಯ, ದೇವಕಿ ದಂಪತಿಗಳಿಂದ ಅನ್ನಸಂತರ್ಪಣೆ ನಡೆಯಿತು.

ಉಚಿತ ತಪಾಸಣೆ: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಬಲಮುರಿ ಸಮುದಾಯ ಭವನದಲ್ಲಿ ಉಚಿತ ಮಧುಮೇಹ ತಪಾಸಣೆ ನಡೆಸಲಾಯಿತು. ದೇವಾಲಯಕ್ಕೆ ಆಗಮಿಸಿದ ಭಕ್ತರು ಅನೇಕ ಮಂದಿ ತಪಾಸಣೆಯ ಪ್ರಯೋಜನ ಪಡೆದುಕೊಂಡರು.

ಈ ಸಂದರ್ಭದಲ್ಲಿ ಅಗಸ್ತ್ಯೇಶ್ವರ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷÀ ಕೊಂಗೀರಂಡ ಸಾಧು ತಮ್ಮಯ್ಯ, ಕಾರ್ಯದರ್ಶಿ ಪೊನ್ನಚ್ಚನ ಜಯ, ಕಾವೇರಿ ಕಣ್ವ ಮುನೀಶ್ವರ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ನೆರವಂಡ ಎಂ. ಅಪ್ಪಚ್ಚು, ಕಾರ್ಯದರ್ಶಿ ಚೆಯ್ಯಂಡ ಗಣಪತಿ ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳು ಹಾಜರಿದ್ದರು.