ಮಡಿಕೇರಿ, ಜು.1: ಸುಮಾರು 15 ದಿನಗಳ ಹಿಂದೆ ಮಡಿಕೇರಿಯ ವ್ಯಾಪಾರಿ ರಿಜ್ವಾನ್‍ರವರಿಗೆ 18000 ರೂ. ಬಿದ್ದು ಸಿಕ್ಕಿತ್ತು. ಪ್ರಾಮಾಣಿಕತೆಯಿಂದ ಅದನ್ನು ‘ಶಕ್ತಿ’ ಕಾರ್ಯಾಲಯಕ್ಕೆ ತಲಪಿಸಿ ಹಣ ಕಳಕೊಂಡವರು ಬಂದರೇ ನೀಡುವಂತೆ ಕೋರಿದ್ದರು.

ಈ ಬಗ್ಗೆ ‘ಶಕ್ತಿ’ಯಲ್ಲಿ ಪ್ರಕಟಣೆ ನೀಡಲಾಗಿತ್ತು. ಆದರೂ ಯಾರೂ ಅದನ್ನು ಪಡೆದಿರಲಿಲ್ಲ. ಹೀಗಾಗಿ ಅದರ ಸದುಪಯೋಗ ಆಗಬೇಕೆಂಬ ಉದ್ದೇಶದಿಂದ ಮಡಿಕೇರಿಯ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ಶಕ್ತಿ ವೃದ್ಧಾಶ್ರಮಕ್ಕೆ ಅದನ್ನು ಒಪ್ಪಿಸಲಾಯಿತು. ಅಲ್ಲಿ ಸುಮಾರು 25 ಮಂದಿ ವೃದ್ಧರು ಆಶ್ರಯ ಪಡೆಯುತ್ತಿದ್ದು, ಸರಕಾರದ ಅನುದಾನ ಸರ್ವ ಸಂಸ್ಥೆಗಳ ಹಾಗೂ ದಾನಿಗಳ ನೆರವಿನಲ್ಲಿ ವೃದ್ಧರ ಕ್ಷೇಮವನ್ನು ನೋಡಿಕೊಳ್ಳಲಾಗುತ್ತಿದೆ. ನೆರವನ್ನು ಹಸ್ತಾಂತರಿಸಿದ ಸಂದರ್ಭ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸತೀಶ್ - ರೀನಾ ದಂಪತಿ ಹಾಗೂ ಸೇವೆ ಸಲ್ಲಿಸುತ್ತಿರುವ ಎಂ.ಎಸ್. ಡಬ್ಲ್ಯು ಪದವೀಧರೆ ಭವ್ಯ ಪಾಲ್ಗೊಂಡಿದ್ದು, ರಿಜ್ವಾನ್ ಹಾಗೂ ‘ಶಕ್ತಿ’ ಪ್ರಧಾನ ವ್ಯವಸ್ಥಾಪಕ ಚಿದ್ವಿಲಾಸ್‍ರವರು ಹಣವನ್ನು ಹಸ್ತಾಂತರಿಸಿದರು.