ಸಿದ್ದಾಪುರ, ಜ. 13: ಸಮೀಪದ ವಾಲ್ನೂರು-ತ್ಯಾಗತ್ತೂರಿನಿಂದ ಕಾನನಕಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ದುರಸ್ತಿ ಮಾಡಬೇಕೆಂದು ಒತ್ತಾಯಿಸಿ ಸ್ಥಳೀಯ ಎಸ್‍ಡಿಪಿಐ ಘಟಕ ಮತ್ತು ಗ್ರಾಮಸ್ಥರು ಸೇರಿ ತ್ಯಾಗತ್ತೂರಿನಲ್ಲಿ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಎಸ್‍ಡಿಪಿಐ ಪಕ್ಷದ ಅಧ್ಯಕ್ಷ ಸಲೀಂ ಮಾತನಾಡಿ, ವರ್ಷಗಳ ಹಿಂದೆ ಮುಖ್ಯ ರಸ್ತೆ ಕಾಂಕ್ರೀಟ್ ಮಾಡುವ ಸಂದರ್ಭ ಬದಲಿ ಮಾರ್ಗವಾಗಿ ವಾಲ್ನೂರು-ತ್ಯಾಗತ್ತೂರಿನಿಂದ ಕಾನನಕಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿರು ವದರಿಂದ ಸಂಪರ್ಕ ರಸ್ತೆಯೂ ಸಂಪೂರ್ಣವಾಗಿ ಹದೆಗೆಟ್ಟಿದೆ. ರಸ್ತೆ ದುರಸ್ತಿಗೆ ಆಗ್ರಹಿಸಿ ವರ್ಷಗಳ ಹಿಂದೆ ಪಕ್ಷದ ವತಿಯಿಂದ ಲೋಕೋಪ ಯೋಗಿ ಇಲಾಖೆ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿ.ಪಂ. ಆಡಳಿತ ಮಂಡಳಿ ಸೇರಿದಂತೆ ಸಂಬಂಧಪಟ್ಟವರಿಗೆ ಮನವಿ ನೀಡಿದರೂ ಇದುವರೆಗೂ ರಸ್ತೆ ದುರಸ್ತಿಗೆ ಮುಂದಾಗಲಿಲ್ಲ ಎಂದು ಆರೋಪಿಸಿದ ಅವರು, ತಾ. 30 ರೊಳಗೆ ರಸ್ತೆ ದುರಸ್ತಿಗೆ ಮುಂದಾಗದಿದ್ದರೆ ತ್ಯಾಗತ್ತೂರು-ಕುಶಾಲನಗರ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟಿಸುವದಾಗಿ ಎಚ್ಚರಿಸಿದರು.

ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ಅಧ್ಯಕ್ಷೆ ನಾಗರತ್ನ ಮಾತನಾಡಿ, ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಅವರ ಬಳಿ ಮನವಿ ಮಾಡಿದ ಸಂದರ್ಭ ರಸ್ತೆ ದುರಸ್ತಿ ಮಾಡುವದಾಗಿ ಭರವಸೆ ನೀಡಿದರೂ ಯಾವದೇ ಪ್ರಯೋಜನವಾಗಲಿಲ್ಲ. ರಸ್ತೆ ಸಂಪೂರ್ಣ ಗುಂಡಿಗಳಿಂದ ಕೂಡಿರುವದರಿಂದ ಸಮೀಪದ ಮನೆಗಳೆಲ್ಲವೂ ದೂಳುಮಯವಾಗಿದೆ. ತುರ್ತು ಸಂದರ್ಭಗಳಲ್ಲಿ ಬಾಣಂತಿಯರು, ಅಂಗವಿಕಲರು ಸೇರಿದಂತೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಬಾಡಿಗೆ ವಾಹನಗಳ ಚಾಲಕರು ಹದೆಗೆಟ್ಟಿರುವ ರಸ್ತೆಯಲ್ಲಿ ಸಂಚರಿಸಲು ಹಿಂಜರಿಯುತ್ತಿದ್ದಾರೆ. ಜಿ.ಪಂ. ಆಡಳಿತ ಮಂಡಳಿಯ ಗಮನಕ್ಕೆ ತಂದರೂ ರಸ್ತೆ ದುರಸ್ತಿಗೆ ಮುಂದಾಗಲಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಎಸ್‍ಡಿಪಿಐ ಪಕ್ಷದ ನಸೀರ್, ಉದಯ, ಮುಸ್ತಫಾ, ರಝಾಕ್ ಸೇರಿದಂತೆ ಗ್ರಾಮಸ್ಥರು ಇದ್ದರು.