ಶ್ರೀಮಂಗಲ, ಸೆ. 29: ರಾಜ್ಯ ಹಾಗೂ ಜಿಲ್ಲೆಯ ಗಡಿ ಭಾಗವಾಗಿರುವ ಕುಟ್ಟ ಕೊಡವ ಸಮಾಜದಲ್ಲಿ ಕೈಲ್‍ಪೊಳ್ದ್ ಹಬ್ಬದ ಪ್ರಯುಕ್ತ ಜನಾಂಗ ಬಾಂಧವರಿಗೆ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಈ ಸಂದರ್ಭ ಸಾಂಪ್ರದಾಯಿಕವಾಗಿ ಆಯುಧ ಪೂಜೆ ನಡೆಸಲಾಯಿತು.

ಕ್ರೀಡಾಕೂಟವನ್ನು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷರು ಆಗಿರುವ ಕುಟ್ಟ ಕೊಡವ ಸಮಾಜದ ಅಧ್ಯಕ್ಷ ವಿಷ್ಣು ಕಾರ್ಯಪ್ಪ ಉದ್ಘಾಟಿಸಿ ಮಾತ ನಾಡಿದ ಅವರು, ಕೈಲ್ ಪೊಳ್ದ್ ಹಬ್ಬವನ್ನು ಎಲ್ಲರ ಮನೆಯಲ್ಲೂ ಆಚರಿಸಲಾಗುತ್ತದೆ. ಆದರೆ ಕೊಡವ ಸಮಾಜದಲ್ಲಿ ಜನಾಂಗದ ಎಲ್ಲರೂ ಸೇರಿ ಆಚರಿಸುತ್ತಿರುವದರಿಂದ ವೇದಿಕೆ ಕಲ್ಪಿಸಿದಂತಾಗಿದೆ. ಜನಾಂಗದಲ್ಲಿ ಒಗ್ಗಟ್ಟು ಮೂಡಿಸಲು ಹಾಗೂ ಸಾಮೂಹಿಕವಾಗಿ ಹಬ್ಬ ಆಚರಣೆ ಪರಸ್ಪರರನ್ನು ಬೆಸೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ದೇವರಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಿ, ಕೊಡವ ಸಾಂಪ್ರದಾಯಿಕ ಆಯುಧಗಳಾದ ಕೋವಿ, ಒಡಿಕತ್ತಿ, ಪೀಚೆಕತ್ತಿ ಇತ್ಯಾದಿ ಆಯುಧಗಳಿಗೆ ಸಮಾಜದ ಕಾರ್ಯದರ್ಶಿ ಕೊಂಗಂಡ ಸುರೇಶ್ ಅವರು ಪೂಜೆ ಸಲ್ಲಿಸಿದರು. ಈ ಸಂದರ್ಭ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವ, ಹೌಸಿ-ಹೌಸಿ, ಸಂಗೀತ ಕುರ್ಚಿ, ವಾಲಗತಾಟ್ ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸಮಾಜದ ಉಪಾಧ್ಯಕ್ಷ ಹೊಟ್ಟೆಂಗಡ ಎಂ. ರಮೇಶ್, ಕಾರ್ಯದರ್ಶಿ ಕೊಂಗಂಡ ಸುರೇಶ್ ದೇವಯ್ಯ, ನಿರ್ದೇಶಕರುಗಳಾದ ಮಚ್ಚಮಾಡ ಬಿ. ಸುಬ್ರಮಣಿ, ಕೇಚಮಾಡ ವಾಸು ಉತ್ತಪ್ಪ, ತೀತಿತ ಸಿ. ಮಂದಣ್ಣ, ತೀತಿರ ಕಬೀರ್ ತಿಮ್ಮಯ್ಯ, ಕೊಳೇರ ಲೀಲಾ ಅಪ್ಪಣ್ಣ, ಕೋದಂಡ ಲೀಲಾ ಕಾರ್ಯಪ್ಪ, ಚೆಪ್ಪುಡಿರ ಪಾರ್ಥ, ಬಾಚರಣಿ ಯಂಡ ಪ್ರಕಾಶ್, ಮುಕ್ಕಾಟಿರ ರಾಜ ಮಂದಣ್ಣ, ಚಕ್ಕೇರ ರಾಬಿನ್ ಕಾರ್ಯಪ್ಪ, ಮತ್ತಿತರರು ಪಾಲ್ಗೊಂಡಿದ್ದರು.