ಕೂಡಿಗೆ, ಆ. 7: ಇತ್ತೀಚೆಗೆ ಹಾರಂಗಿ ನಾಲೆಯಲ್ಲಿ ನೀರು ಹರಿಸಿದ ಪರಿಣಾಮ ಬಾಲಕ ನೋರ್ವ ಮೃತನಾಗಿದ್ದು, ಈ ಸಂಬಂಧ ನೀರಾವರಿ ಇಲಾಖೆಯ ಅಧಿಕಾರಿಗಳು, ಹಾರಂಗಿ ನಾಲೆಯ ರೈತ ಮುಖಂಡರು ಹಾಗೂ ಪೊಲೀಸ್ ಇಲಾಖೆಯ ಸಹ ಭಾಗಿತ್ವದಲ್ಲಿ ಕುಶಾಲನಗರ ಪೊಲೀಸ್ ಡಿವೈಎಸ್‍ಪಿ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಬಾಲಕನ ಸಾವು ಹಾಗೂ ನಾಲೆಗೆ ನೀರು ಹರಿಸುವಿಕೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ವಿಚಾರವಾಗಿ ಚರ್ಚೆಗಳು ನಡೆದವು. ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ನಡೆಯದಹಾಗೆ ಕಾನೂನು ಹಾಗೂ ನೀರಾವರಿ ಇಲಾಖೆಯ ನಿಯಮ ದನುಸಾರ, ನೀರು ಬಳಕೆದಾರರ ಸಮಿತಿಗಳ ಸಭೆಗಳನ್ನು ಕರೆದು ನಾಲೆಗೆ ನೀರು ಬಿಡುವದು ಸೇರಿದಂತೆ ಪ್ರಮುಖ ವಿಚಾರಗಳು ಚರ್ಚೆ ಯಾದವು. ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಹಾಗೂ ನಾಲೆ ಮತ್ತು ನದಿಗೆ ನೀರು ಹರಿಸುವ ಸಂದರ್ಭ ಆ ವ್ಯಾಪ್ತಿಯ ಕೆಳದಂಡೆಯ ಸಾರ್ವಜನಿಕರಿಗೆ ಮುನ್ಸೂಚನೆ ನೀಡಬೇಕು. ನೀರು ಹರಿಯುವ ಪ್ರದೇಶದ ಕೆಲ ಕಿ.ಮೀ. ದೂರ ಪರೀಕ್ಷಿಸುವ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಡಿ.ವೈ.ಎಸ್.ಪಿ. ಕುಮಾರ್ ಸೂಚಿಸಿದರು.

ಸಭೆಯಲ್ಲಿ ಹಾಜರಿದ್ದ ರೈತ ಮುಖಂಡರಾದ ಕೆ.ಸಿ. ನಂಜುಂಡ ಸ್ವಾಮಿ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಂಬಂಧಪಟ್ಟ ವಿಷಯದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ಈ ಸಂದರ್ಭ ಕಾರ್ಯಪಾಲಕ ಅಭಿಯಂತರ ರಂಗಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಧರ್ಮರಾಜ್, ಇಂಜಿನಿಯರ್ ನಾಗರಾಜ್, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಜೆ.ಇ. ಮಹೇಶ್, ಶ್ರೀ ರಾಮಲಿಂಗೇಶ್ವರ ನೀರು ಬಳಕೆದಾರರ ಸಂಘದ ನಿರ್ದೇಶಕ ಕುಮಾರ್, ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಕುಮಾರ್, ಮಾಜಿ ಗ್ರಾ.ಪಂ. ಸದಸ್ಯ ಧನಂಜಯ್, ಮೃತ ಬಾಲಕನ ಪೋಷಕರು ಹಾಗೂ ರೈತ ಮುಖಂಡರು ಸೇರಿದಂತೆ ಸಾರ್ವಜನಿಕರು ಇದ್ದರು.