ಮಡಿಕೇರಿ ಜು.12: ಮೃತ ಡಿವೈ.ಎಸ್ಪಿ ಎಂ.ಕೆ.ಗಣಪತಿ ಅವರ ಕಿರಿಯ ಸಹೋದರ ಎಂ.ಕೆ ಮಾಚಯ್ಯ ಅವರು ತಮ್ಮ ಹೇಳಿಕೆ ಪ್ರಕಟಗೊಂಡ ಕುರಿತು ಈ ಕೆಳಗಿನ ಸ್ಪಷ್ಟನೆಯಿತ್ತಿದ್ದಾರೆ. ತನ್ನ ಮೃತ ಸಹೋದರ ಈ ಹಿಂದೆ ಬೆಂಗಳೂರಿನಲ್ಲಿ ಕರ್ತವ್ಯದಲ್ಲಿದ್ದಾಗ ಮತ್ತೊಬ್ಬ ಸಹೋದರ ಎಂ.ಕೆ.ತಮ್ಮಯ್ಯ ಅವರು ಕೂಡ ಬೆಂಗಳೂರಿನಲ್ಲಿ ಕರ್ತವ್ಯದಲ್ಲಿದ್ದರು. ಆ ಸಂದರ್ಭ ತಮಗೆ ಮೇಲ್ಮಟ್ಟದಿಂದ ಶೋಷಣೆಯಾಗುತ್ತಿರುವ ಕುರಿತು ಗಣಪತಿ ತನ್ನ ತಮ್ಮ ತಮ್ಮಯ್ಯ ಅವರೊಂದಿಗೆ ತಿಳಿಸಿದ್ದು ತಾನು ಮಾನಸಿಕವಾಗಿ ನೊಂದಿರುವದಾಗಿಯೂ ಹೇಳಿದ್ದರು. ಈ ಹಿನ್ನೆಲೆಯಲ್ಲಿ ತಮ್ಮಯ್ಯ ಅವರು ತನ್ನ ಅಣ್ಣ ಗಣಪತಿ ಅವರಿಗೆ ಸಲಹೆಯಿತ್ತು ವೈದ್ಯರನ್ನು ಸಂಪರ್ಕಿಸುವಂತೆ ತಿಳಿಸಿದ್ದರು. ಈ ವಿಚಾರದ ಕುರಿತು ತಮ್ಮಯ್ಯ ಈ ಹಿಂದೆ ಮಾಧ್ಯಮದ ಮುಂದೆ ತಿಳಿಸಿದ್ದಾರೆಯೇ ಹೊರತು ತನ್ನ ಅಣ್ಣ ಗಣಪತಿಯ ವಿರುದ್ಧ ಯಾವದೇ ಹೇಳಿಕೆ ನೀಡಿಲ್ಲ. ಗಣಪತಿ ಅವರ ಸಾವಿನ ತನಿಖೆ ವಿಚಾರದಲ್ಲಿ ನೊಂದಿರುವ ನಾವೆಲ್ಲ ಕುಟುಂಬಸ್ಥರು ಒಗ್ಗಟ್ಟಿನಿಂದಿದ್ದೇವೆ ಎಂದು ಮಾಚಯ್ಯ ಸ್ಪಷ್ಟಪಡಿಸಿದ್ದಾರೆ.