ಸುಂಟಿಕೊಪ್ಪ, ಮೇ 2 : ಕೊಡಗರಹಳ್ಳಿಯಲ್ಲಿ ಕಳೆದ 1 ವಾರದಿಂದ ಕಾಡಾನೆ ಧಾಳಿಯಿಂದ ಕೃಷಿ ಗಿಡಗಳು ನಾಶವಾಗಿದ್ದು, ವ್ಯಕ್ತಿಯೊಬ್ಬರ ಮನೆಗೆ ಒಂಟಿ ಸಲಗ ಧಾಳಿ ಮಾಡಿ ನಷ್ಟ ಪಡಿಸಿದೆ.

ಕೊಡಗರಹಳ್ಳಿ ಅಯ್ಯಟ್ಟಿ ಚಂದ್ರ ಎಂಬವರ ತೋಟಕ್ಕೆ ಲಗ್ಗೆ ಇಟ್ಟ ಒಂಟಿ ಸಲಗ ಬಾಳೆಗಿಡ ತಿಂದು ಹಾಕಿದ್ದು, ಕಾಫಿ ಗಿಡಗಳನ್ನು ನಾಶಪಡಿಸಿದೆ. ತೋಟದ ಬದಿಯಲ್ಲಿಟ್ಟ ಪೈಪುಗಳನ್ನು ಒಡೆದು ಹಾಕಿದೆ. ಚಂದ್ರ ಅವರ ಮನೆಯ ಗೋಡೆಯನ್ನು ತಿವಿದು ನಾಶಪಡಿಸಿ ಬಾಗಿಲನ್ನು ಮುರಿದಿದೆ. ಮನೆಯ ಪ್ರವೇಶ ದ್ವಾರದ ಮೆಟ್ಟಿಲಿನ ಕಟ್ಟೆಯನ್ನು ತುಳಿದು ನಷ್ಟ ಪಡಿಸಿದೆ.

ಕಾಡಾನೆ ಧಾಳಿಯಿಂದ ಕಾರ್ಮಿಕರು ಶಾಲಾಮಕ್ಕಳು ಭಯಭೀತರಾಗಿದ್ದಾರೆ. ಕಾಡಾನೆಯನ್ನು ಕಾಡಿಗೆ ಅಟ್ಟುವ ಕೆಲಸವನ್ನು ಅರಣ್ಯ ಇಲಾಖೆಯವರು ಮಾಡಬೇಕು ಹಾಗೂ ಪರಿಹಾರ ನೀಡಬೇಕೆಂದು ಚಂದ್ರ ಅವರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.