ಮಡಿಕೇರಿ, ಫೆ, 3: 108 ಸೂರ್ಯನಮಸ್ಕಾರ ಮಾಡುವ ಮೂಲಕ ಸೂರ್ಯದೇವನಿಗೆ ನಮಿಸುವದರೊಂದಿಗೆ ರಥಸಪ್ತಮಿಯನ್ನು ಆಚರಿಸಲಾಯಿತು.ಭಾರತೀಯ ವಿದ್ಯಾಭವನದ ಯೋಗ ಕೇಂದ್ರ, ಪತಂಜಲಿ ಯೋಗಶಿಕ್ಷಣ ಸಮಿತಿ ಮತ್ತು ಅಶ್ವಿನಿ ಆಸ್ಪತ್ರೆಯ ಯೋಗಕೇಂದ್ರದ ಸಹಯೋಗದೊಂದಿಗೆ ರಥಸಪ್ತಮಿ ನಿಮಿತ್ತ 108 ಸೂರ್ಯನಮಸ್ಕಾರವನ್ನು ನಗರದ ರಾಜಾಸೀಟ್ ಉದ್ಯಾನ ವನದಲ್ಲಿ ಮಾಡುವದರೊಂದಿಗೆ ಸೂರ್ಯದೇವನಿಗೆ ನಮಿಸಲಾಯಿತು.ಸುಮಾರು 9 ವರ್ಷದಿಂದ 79 ವರ್ಷದವರೆಗಿನ ವಯೋಮಾನದವರು ಭಾಗವಹಿಸಿ ಸೂರ್ಯನಮಸ್ಕಾರ ಮಾಡಿ ಗಮನ ಸೆಳೆದರು. ಈ ಸಂದರ್ಭ ಯೋಗ ಶಿಕ್ಷಕರಾದ ಕೆ.ಕೆ.ಮಹೇಶ್‍ಕುಮಾರ್, ಶ್ರೀಪತಿ ಹಾಗೂ ಯೋಗ ಶಿಕ್ಷಕರಾದ ನಾಪಂಡ ಲೋಕೇಶ್, ಕೂಡಕಂಡಿ ಸೋಮಣ್ಣ, ಮಲ್ಲಿಗೆ, ಡಾ. ಪ್ರಸಾದ್ ಹೊಳ್ಳ, ಸುಧಾಕರ್, ಈಶ್ವರ್ ಭಟ್, ಶಿಲ್ಪ ರವೀಂದ್ರ ರೈ ಹಾಗೂ ಇನ್ನಿತರರು ಸೇರಿದಂತೆ ಸುಮಾರು 60 ಮಂದಿ ಬೆಳಿಗ್ಗೆ 5-30 ರಿಂದ 7 ಗಂಟೆವರೆಗೆ ಸೂರ್ಯ ನಮಸ್ಕಾರ ಮಾಡಿದರು.