ಮಡಿಕೇರಿ, ಫೆ. 3 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಚಲನ ಚಿತ್ರೋತ್ಸವ ಸಪ್ತಾಹ ಅಂಗವಾಗಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕೆ ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಹಾಗೂ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಚಾಲನೆ ನೀಡಿದರು. ನಗರದ ಕಾವೇರಿ ಮಹಲ್ ಚಿತ್ರಮಂದಿರದಲ್ಲಿ ತಾ. 9 ರವರೆಗೆ ನಡೆಯುವ ಚಲನಚಿತ್ರೋತ್ಸವ ಸಪ್ತಾಹಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಬಿ.ಎ. ಹರೀಶ್ ಅವರು ಇತ್ತೀಚಿನ ದಿನಗಳಲ್ಲಿ ಕನ್ನಡ ಚಲನಚಿತ್ರಗಳನ್ನು ನೋಡುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಸದಭಿರುಚಿಯ ಚಲನಚಿತ್ರಗಳನ್ನು ವೀಕ್ಷಣೆ ಮಾಡಿ ಚಲನಚಿತ್ರ ಬೆಳವಣಿಗೆಗೆ ಸಹಕರಿಸಬೇಕಿದೆ. ಆ ನಿಟ್ಟಿನಲ್ಲಿ ಒಳ್ಳೆಯ ಸಂದೇಶ ಒಳಗೊಂಡ ಚಲನಚಿತ್ರಗಳು ಸಹ ಬರಬೇಕಿದೆ ಎಂದರು. ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಮಾತನಾಡಿ ಚಲನಚಿತ್ರಗಳು ಅನಕ್ಷರಸ್ಥರಿಗೂ ಅರ್ಥವಾಗುವ ಮಾಧ್ಯಮವಾಗಿದ್ದು, ಜನರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ.