ಶ್ರೀಮಂಗಲ, ಫೆ. 3: ಕುಟ್ಟ ಕೊಡವ ಸಮಾಜ ಹಾಗೂ ಗಡಿ ಪ್ರದೇಶದ ಮೂರು ಗ್ರಾ.ಪಂ.ಗಳಾದ ಕುಟ್ಟ, ನಾಲ್ಕೇರಿ, ಕೆ. ಬಾಡಗ, ಕುಟ್ಟ ಚೇಂಬರ್ ಆಫ್ ಕಾಮರ್ಸ್, ಕೆ. ಬಾಡಗ ಮಹಿಳಾ ಸಾಂಸ್ಕøತಿಕ ಸಂಸ್ಥೆ ಮತ್ತು ಸಾರ್ವಜನಿಕರ ಆಶ್ರಯದಲ್ಲಿ ಕಳೆದ 2 ತಿಂಗಳಿನಿಂದ ಹಮ್ಮಿಕೊಂಡಿರುವ ಸ್ವಚ್ಛತಾ ಆಂದೋಲನ ಹಾಗೂ ಪ್ಲಾಸ್ಟಿಕ್ ನಿರ್ಮೂಲನೆ ಕಾರ್ಯಕ್ರಮ ಅಂಗವಾಗಿ 10 ಸಾವಿರ ಬಟ್ಟೆ ಬ್ಯಾಗ್‍ಗಳನ್ನು ಅಂಗಡಿ ಮಳಿಗೆಗಳಿಗೆ ಉಚಿತವಾಗಿ ನೀಡಲಾಯಿತು.ಇದಲ್ಲದೆ ಈ ಮೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ಈಗಾಗಲೇ 2 ಬಾರಿ ಶಿಕ್ಷಣ, ಪೊಲೀಸ್ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಜಾಗೃತಿ ಜಾಥಾ ಮಾಡಲಾಗಿದೆ ಎಂದು ಕುಟ್ಟ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹೇಳಿದರು. ಈಗಾಗಲೇ ಸಾರ್ವಜನಿಕತ ವಂತಿಗೆಯಿಂದ 3 ಗ್ರಾ.ಪಂ. ವ್ಯಾಪ್ತಿಯಲ್ಲಿ 40 ಕಸದ ತೊಟ್ಟಿ ಅಲ್ಲದೆ ಪಂಚಾಯಿತಿ ಅನುದಾನದಿಂದ 40 ಜಾಗೃತಿ ಫಲಕ ಅಳವಡಿಸಲಾಗಿದೆ ಎಂದು ಅವರು ಹೇಳಿದರು. 10 ಸಾವಿರ ಬಟ್ಟೆಯ ಬ್ಯಾಗ್‍ಗಳನ್ನು ಪ್ಲಾಸ್ಟಿಕ್ ಬ್ಯಾಗ್‍ಗೆ ಬದಲಾಗಿ ಉಚಿತವಾಗಿ ಅಂಗಡಿಗಳಿಗೆ ನೀಡಲಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಕುಟ್ಟ ಕೊಡವ ಸಮಾಜದ ಪಧಾದಿಕಾರಿಗಳಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕೇಚಮಾಡ ವಾಸು ಉತ್ತಪ್ಪ, ಮಾಚಿಮಾಡ ರಾಜ ತಿಮ್ಮಯ್ಯ ಅವರು ಭರಿಸಿದ್ದಾರೆ.

ಶುಚಿತ್ವ ಕಾಪಾಡದಿದ್ದರೆ ಹೊಟೇಲ್ ಪರವಾನಗೆ ರದ್ದು: ಕುಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವಾರು ಹೊಟೇಲ್‍ಗಳಿದ್ದು, ಹೊಟೇಲ್‍ಗಳಲ್ಲಿ ಮತ್ತು ಹೊಟೇಲ್ ಅಡಿಗೆ ಮನೆಗಳಲ್ಲಿ ಶುಚಿತ್ವ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಈ ಬಗ್ಗೆ ಗ್ರಾ.ಪಂ.ನಿಂದ ದಿಢೀರ್ ಆಗಿ ಭೇಟಿ ನೀಡಿ ಪರಿಶೀಲಿಸಲಾಗುವದು. ಲೋಪ-ದೋಷ ಕಂಡುಬಂದರೆ ಅಂತಹ ಹೊಟೇಲ್‍ಗಳ ಪರವಾನಗೆಯನ್ನು ರದ್ದು ಮಾಡಲಾಗುದೆಂದು ಗ್ರಾ.ಪಂ. ಸದಸ್ಯ ಹಾಗೂ ಅಕ್ರಮ-ಸಕ್ರಮ ಸಮಿತಿ ಸದಸ್ಯ ಹೆಚ್.ವೈ. ರಾಮಕೃಷ್ಣ ಎಚ್ಚರಿಸಿದರು.

15 ರಿಂದ ಪ್ಲಾಸ್ಟಿಕ್ ನಿಷೇಧ: ತಾ. 15 ರೊಳಗೆ ಈ ಮೂರು ಗ್ರಾ.ಪಂ. ವ್ಯಾಪ್ತಿಯ ಅಂಗಡಿ ಮಳಿಗೆಗಳಲ್ಲಿರುವ ಎಲ್ಲಾ ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಖಾಲಿ ಮಾಡಿಕೊಳ್ಳಬೇಕು. 15 ರ ನಂತರ ಪ್ಲಾಸ್ಟಿಕ್ ಬ್ಯಾಗ್ ಬಳಸುವದು ಕಂಡು ಬಂದರೆ ಪ್ರಥಮ ಬಾರಿಗೆ 3 ಸಾವಿರ, 2ನೇ ಬಾರಿಗೆ 5 ಸಾವಿರ ದಂಡ ವಿಧಿಸಲು ನಿರ್ಧರಿಸಲಾಗಿದೆ. ಇದಲ್ಲದೆ ಮಾರ್ಚ್ 1 ರ ನಂತರ ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಬಳಸುವ ಪರವಾನಗೆ ರದ್ದು ಮಾಡಲು ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭ ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಉಪಧ್ಯಕ್ಷ ಕೊಂಗಂಡ ಸುರೇಶ್, ಕುಟ್ಟ ಗ್ರಾ.ಪಂ. ಅಧ್ಯಕ್ಷೆ ಲೀಲಾ ಪ್ರಭು, ಕೆ. ಬಾಡಗ ಗ್ರಾ.ಪಂ. ಅಧ್ಯಕ್ಷ ಚೆಪ್ಪುಡಿರ ಡಿ. ಬೋಪಣ್ಣ, ನಾಲ್ಕೇರಿ ಗ್ರಾ.ಪಂ. ಅಧ್ಯಕ್ಷ ಅಲ್ಲುಮಾಡ ಮುತ್ತಪ್ಪ, ಕುಟ್ಟ ಪಿ.ಡಿ.ಒ ಬಲರಾಮ್, ಕುಟ್ಟ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮುಕ್ಕಾಟಿರ ನವೀನ್ ಅಯ್ಯಪ್ಪ, ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಹೆಚ್.ವೈ. ರಾಮಕೃಷ್ಣ, ಕುಟ್ಟ ಗ್ರಾ.ಪಂ. ಸದಸ್ಯರಾದ ತೀತಿರ ರುಕ್ಕು ನಂಜಪ್ಪ, ಕೊಡವ ಸಮಾಜ ಪಧಾದಿಕಾರಿಗಳಾದ ಮಾಚಿಮಾಡ ರಾಜ ತಿಮ್ಮಯ್ಯ, ತೀತಿರ ಬೊಳ್ಳು ಚಿಣ್ಣಪ್ಪ, ಕೇಚಮಾಡ ವಾಸು ಉತ್ತಪ್ಪ, ಹಾಗೂ ಮತ್ತಿತರರು ಹಾಜರಿದ್ದರು.