ಗೋಣಿಕೊಪ್ಪಲು, ಫೆ. 4: ರೈಲು ಮಾರ್ಗ ಯೋಜನೆ, ಹೈಟೆನ್ಷನ್ ವಿದ್ಯುತ್ ಮಾರ್ಗ, ಕಣ್ಣೂರು ವಿಮಾನ ನಿಲ್ದಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಜಿಲ್ಲೆಗೆ ಮಾರಕ ಎಂದು ವಿಚಾರವಾದಿ, ಸಾಹಿತಿ ಸಿ.ಪಿ. ಬೆಳ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಪೊನ್ನಂಪೇಟೆ ಜೂನಿಯರ್ ಕಾಲೇಜು ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕರ್ನಾಟಕ ಏಕೀಕರಣ ವರ್ಷಾಚಾರಣೆ ಅಂಗವಾಗಿ ಕೊಡಗು ಜಿಲ್ಲೆಗೆ ಸಿಮೀತವಾಗಿ ಕರ್ನಾಟಕ ಏಕೀಕರಣದ ಸಾಧಕ ಬಾಧಕಗಳ ಉಪನ್ಯಾಸದಲ್ಲಿ ಅವರು ಮಾತನಾಡಿದರು. ಪರಿಸರಕ್ಕೆ ಹಾನಿಕಾರಕವಾದ ಯೋಜನೆಗಳನ್ನು ಸರಕಾರ ನೀಡುತ್ತಿದೆ. ಇದರಿಂದ ಜನರಿಗೆ ಪ್ರಯೋಜನವಿಲ್ಲ. ರೈಲು ಮಾರ್ಗ ಯೋಜನೆ ಕೊಡಗಿನ ಜನರಿಗೆ ಉಪಯೋಗವಿಲ್ಲ. ಇದರಿಂದ ಇಲ್ಲಿನ ಪರಿಸರ ಹಾಳಾಗುತ್ತದೆ. ಸಾವಿರಾರು ಮರಗಳು, ಬೆಟ್ಟಗಳು ನೆಲಕ್ಕುರುಳುತ್ತವೆÉ.

(ಮೊದಲ ಪುಟದಿಂದ) ಇದರಿಂದ ಜಿಲ್ಲೆಯ ವಾತಾವರಣ ಬದಲಾಗುವದರೊಂದಿಗೆ ಜೀವಜಲಕ್ಕೂ ಸಮಸ್ಯೆ ಆಗುತ್ತದೆ. ಸರಕಾರ ಜನವಿರೋಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವದನ್ನು ತಡೆಗಟ್ಟುವ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಹೈಟೆನ್ಷನ್ ಯೋಜನೆಯಿಂದ ಸಾವಿರಾರು ಮರಗಳು ನೆಲಕ್ಕುರುಳಿವೆ. ಇದರ ಪರಿಣಾಮ ಜಿಲ್ಲೆಯಲ್ಲಿ ಈ ಬಾರಿ ಶೇಕಡ 50ರಷ್ಟು ಮಳೆಯಾಗಿ ರೈತ ಸಂಕಷ್ಟಕ್ಕೆ ಈಡಾಗಿರುವದನ್ನು ಕಾಣಬಹುದಾಗಿದೆ.

ಪ್ರವಾಸೋದ್ಯಮದಿಂದ ಜಿಲ್ಲೆ ಅಭಿವೃದ್ದಿಯತ್ತ ಸಾಗುತ್ತಿದೆ. ಹೋಂಸ್ಟೆ, ರೆಸಾರ್ಟ್‍ಗಳಿಂದ ಕೊಡಗಿಗೆ ಮಾರಕವಾಗುತ್ತಿದೆ. ಸರಕಾರ ಈ ಬಗ್ಗೆ ಗಮನಿಸಬೇಕು.

ಕೊಡಗು ಪ್ರತ್ಯೇಕ ರಾಜ್ಯವಾಗಿದ್ದಾಗ ಇಲಾಖೆಗಳಲ್ಲಿ ಭ್ರಷ್ಟಾಚಾರ ಕಾಣ ಸಿಗುತ್ತಿರಲಿಲ್ಲ. ಕರ್ನಾಟಕ ರಾಜ್ಯಕ್ಕೆ ಕೊಡಗು ವಿಲೀನವಾದ್ದರಿಂದಲೇ ಇಲಾಖೆಗಳನ್ನು ನಿಯಂತ್ರಿಸಲಾಗದೆ ಭ್ರಷ್ಟಾಚಾರ ಬೆಳೆದು ನಿಂತಿದೆ ಎಂದು ತಿಳಿಸಿದರು.

ಮಾಜಿ ಜಿ.ಪಂ. ಸದಸ್ಯ ಮೂಕಳೇರ ಕುಶಾಲಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷಾಭಿಮಾನ ವಿದ್ಯಾರ್ಥಿ ಹೃದಯದಲ್ಲೇ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆಯಲ್ಲಿಯೇ ಉನ್ನತ ಪರೀಕ್ಷೆಗಳನ್ನು ಬರೆಯಬೇಕು ಎಂದು ಸಲಹೆ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಚುಟುಕು ರತ್ನ ಸಾಹಿತಿ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ ಮಾತನಾಡಿ, ಕನ್ನಡ ಪ್ರತಿಯೊಬ್ಬನ ರಕ್ತದ ಕಣದಲ್ಲೂ ಹರಿದಾಡಬೇಕು. ಕನ್ನಡಕ್ಕಾಗಿ ಜೀವ ಬಿಡಲು ಸಿದ್ದರಾಗಬೇಕು. ಕನ್ನಡ ಸಾಹಿತ್ಯವನ್ನು ಹೆಚ್ಚು ಅಧ್ಯಯನ ಮಾಡುವದರಿಂದ ಕನ್ನಡ ಉಳಿವು ಮತ್ತು ತಮ್ಮ ಜ್ಞಾನ ವೃದ್ದಿಗೂ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ನಮ್ಮ ಭಾಷೆಯನ್ನು ನಮ್ಮ ತಂದೆ ತಾಯಿಗಳಂತೆ ಪ್ರೀತಿಸಿ ಗೌರವಿಸಬೇಕು. ಕನ್ನಡ ಸಾಹಿತ್ಯದ ಬೆಳವಣಿಗೆ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲೇಂಗಡ ಮಧೋಶ್ ಪೂವಯ್ಯ ಮಾತನಾಡಿ, ಸಾಹಿತ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿ ಗಳು ಭಾಗಿಯಾಗುವದರಿಂದ ಚಿಂತನೆಗಳು ವೃದ್ದಿಗೊಳ್ಳುತ್ತದೆ ಎಂದು ಹೇಳಿದರು.

ಕಂಡಂಗಾಲ ಜಿ.ಎಂ.ಪಿ. ಶಾಲೆ ಮುಖ್ಯೋಫಾದ್ಯಾಯಿನಿ ವೈ.ಎನ್ ಕಾವೇರಿ, ‘ಕರ್ನಾಟಕ ಏಕೀಕರಣ 60 ವರ್ಷಗಳಲ್ಲಿ' ಎಂಬ ವಿಚಾರವಾಗಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯೆ ಶ್ರೀಜಾ ಸಾಜಿ, ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ್ರ ಗಣೇಶ್, ತಾ.ಪಂ. ಸದಸ್ಯೆ ಆಶಾ ಪೂಣಚ್ಚ, ನಾಗರಿಕ ಹೋರಾಟಗಾರ ಅಜ್ಜಮಾಡ ಶಂಕರು ನಾಚಪ್ಪ, ಜೂನಿಯರ್ ಕಾಲೇಜು ಎಸ್.ಡಿ.ಎಂ.ಸಿ ಉಪಾಧ್ಯಕ್ಷ ದಿನೇಶ್ ಚಿಟ್ಟಿಯಪ್ಪ, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಸಾಹಿತ್ಯ ಪರಿಷತ್ ಕಾರ್ಯದರ್ಶಿ ಚಮ್ಮಟ್ಟಿರ ಪ್ರವೀಣ್, ಪೊನ್ನಂಪೇಟೆ ಪ್ರೌಢÀಶಾಲಾ ಮುಖ್ಯೋಪಾಧ್ಯಾಯಿನಿ ಚಂದನ ಡಿ, ಪದವಿ ಕಾಲೇಜು ಪ್ರಾಂಶುಪಾಲೆ ಎ.ಕೆ. ಪಾರ್ವತಿ ಉಪಸ್ಥಿತರಿದ್ದರು.