*ಗೋಣಿಕೊಪ್ಪ, ಫೆ. 4: ಹುಣಸೂರು ಮಾರ್ಗಕ್ಕೆ ಕೊಂಗಣ ಹೊಳೆ ತಿರುವು ಯೋಜನೆಯನ್ನು 9 ಗ್ರಾಮಗಳಾದ, ಬೇಗೂರು, ಚೆನಿವಾಡ, ಈಚೂರು, ಹುದ್ದೂರು, ಹಳ್ಳಿಗಟ್ಟು, ಹುದಿಕೇರಿ, ಬಿ.ಶೆಟ್ಟಿಗೇರಿ, ಕುಂದಾ, ಪೊನ್ನಂಪೇಟೆ ಗ್ರಾಮಸ್ಥರು ವಿರೋಧಿಸಿ ನಿರ್ಣಯ ಕೈಗೊಂಡರು.ಮಾಜಿ ಎಂ.ಎಲ್.ಸಿ. ಅರುಣ್ ಮಾಚಯ್ಯ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆ ತಾಲೂಕು ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರು ಈ ನಿರ್ಣಯ ಕೈಗೊಂಡರು. ಮೈಸೂರು, ಬೆಂಗಳೂರು ಮಹಾನಗರಗಳಿಗೆ ನೀರನ್ನು ಹರಿಸಲು ಕೊಂಗಣ ಹೊಳೆಯಲ್ಲಿನ ನೀರನ್ನು ಕೊಲ್ಲಿತೋಡುವಿನ ಮುಖಾಂತರ ಲಕ್ಷ್ಮಣ ತೀರ್ಥ ನದಿ ಮೂಲಕ ಹುಣಸೂರು, ಮೈಸೂರು ಭಾಗಕ್ಕೆ ನೀಡುವದರಿಂದ ಈ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ.

ಅಪಾರ ಪ್ರಮಾಣದ ಅಸ್ತಿ ಪಾಸ್ತಿ, ಅರಣ್ಯ ಮತ್ತು ಪ್ರಾಣಿ ಪ್ರಬೇಧಗಳು ನಶಿಸಿಹೋಗುತ್ತದೆ. ನಗರ ನಿವಾಸಿಗಳ ಬದುಕು ಹಸನುಗೊಳಿಸಲು ಸ್ಥಳೀಯ ಗ್ರಾಮದ ಜನರನ್ನು ಸಂಕಟಕ್ಕೆ ತಳ್ಳುವ ಸರಕಾರದ ನಿಯಮಸರಿಯಿಲ್ಲ ಎಂಬ ಆರೋಪ ಕೇಳಿಬಂತು.

ದ.ಕೊಡಗಿನ ಬಹುತೇಕ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಸ್ಥಳೀಯ ಜನರಿಗೆ ನೀರು ಪೂರೈಸುವ ಯೋಜನೆ ಅನುಷ್ಠಾನಗೊಳಿಸದೆ ನೀರನ್ನು ಬೇರೆ ಜಿಲ್ಲೆಗಳಿಗೆ ಬಳಸುವ ಯೋಜನೆ ರೂಪಿಸಿದ್ದನ್ನು ಗ್ರಾಮಸ್ಥರು ಖಂಡಿಸಿದರು.

ಕೊಂಗಣ ಹೊಳೆಯ ನೀರನ್ನು ಸ್ಥಳೀಯರೆ ಬಳಸಿಕೊಳ್ಳುವಂತೆ ಕಾರ್ಯಯೋಜನೆ ರೂಪಿಸಿ ಸರಕಾರಕ್ಕೆ ಕಳುಹಿಸಿ ಬಜೆಟ್‍ನಲ್ಲಿ ಅನುಷ್ಠಾನ ಮಾಡುವಂತೆ ಒಮ್ಮತದ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಮಾಜಿ ಎಂ.ಎಲ್.ಸಿ ಅರುಣ್ ಮಾಚಯ್ಯ ಮಾತನಾಡಿ, ರಾಜ್ಯ ಒಳಚರಂಡಿ

(ಮೊದಲ ಪುಟದಿಂದ) ನಿರಾವರಿಯ ಅಧ್ಯಕ್ಷರಾಗಿದ್ದ ಜೆ. ಪರಮಶಿ ಅವರು 2004ರಲ್ಲಿ ಒಂದು ಅಧ್ಯಯನವನ್ನು ಮಾಡಿ ಕುಡಿಯುವ ನೀರಿನ ಸಮಸೆÀ್ಯಯನ್ನು ಯಾವ ಜಿಲ್ಲೆಗಳು ಅನುಭವಿಸುತ್ತಿವೆ ಎಂಬ ವರದಿಯನ್ನು ಸರಕಾರಕ್ಕೆ ನೀಡಿದ್ದಾರೆ, ಅದರಲ್ಲಿ ಪ್ರಮುಖವಾಗಿ ಕೊಡಗಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎತ್ತಿ ತೋರಿಸಿದ್ದಾರೆ, ವಾಸ್ತವದಲ್ಲಿ ಇದು ಸತ್ಯವಾಗಿದ್ದು, ಜಿಲ್ಲೆಯ ದಕ್ಷಿಣ ಭಾಗದ ಪೊನ್ನಂಪೇಟೆ, ಗೋಣಿಕೊಪ್ಪ, ಹುದಿಕೇರಿ, ಬಿ. ಶೇಟ್ಟಿಗೇರಿ, ಕಾನೂರು, ಬಾಳೆಲೆ, ತಿತಿಮತಿ, ಹಾತೂರು ಗ್ರಾ.ಪಂ ಯಲ್ಲಿ ನೀರಿನ ಸಮಸ್ಯೆ ಇದ್ದು ಈ ಕೊಂಗಣ ಹೊಳೆಯಿಂದ ಈ ಭಾಗಕ್ಕೆ ನೀರನ್ನು ಬಳಸುವಂತೆ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ನೀರು ಬಳಕೆಯ ಕಾರ್ಯಯೋಜನೆಯನ್ನು ರೂಪಿಸಿ ಸರಕಾರಕ್ಕೆ ಬೇಡಿಕೆ ಸಲ್ಲಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು.

ಜಿಲ್ಲೆಯ ಜನರಿಗೆ ಮಾರಕವಾದ ಈ ಯೋಜನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು, ಮಹಿಳಾ ಸಂಘಗಳು, ಸ್ತ್ರೀ ಶಕ್ತಿ ಗುಂಪುಗಳ ಪ್ರತಿನಿಧಿಗಳು, ಊರಿನ ಪ್ರಮುಖರನ್ನು ಒಳಗೊಂಡಂತಹ ಸಮಿತಿಯನ್ನು ರಚಿಸಿ, ದೊಡ್ಡ ಮಟ್ಟದ ಪ್ರತಿಭಟನೆ ಯನ್ನು ಮಾಡುವದರ ಮೂಲಕ ಈ ಕಾಮಗಾರಿಯನ್ನು ತಡೆಯು ವಂತಾಗಬೇಕು ಎಂದು ಆಗ್ರಹಿಸಿದರು.

ಜಿಲ್ಲಾ .ಜೆ.ಡಿ.ಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ ಸರಕಾರ ಕೊಡಗಿನ ಬಗ್ಗೆ ತಾತ್ಸಾರ ಮನೋಭಾವ ಹೊಂದಿದ್ದು, ಬಲಾತ್ಕಾರದಿಂದ ವಿವಿಧ ಯೋಜನೆಗಳನ್ನು ನಮ್ಮ ಮೇಲೆ ಹೇರುತ್ತಿರುವದು ಸರಿಯಲ್ಲ ರಾಜ್ಯ ಸರಕಾರ ಸರ್ವಾಧಿಕಾರ ಮನೋಭಾವನೆಯನ್ನು ನಿಲ್ಲಿಸಬೇಕು, ಕೇವಲ ಎರಡು ಜನ ಶಾಸಕರಿದ್ದಾರೆ ಎಂಬ ಮಾತ್ರಕ್ಕೆ ಜಿಲ್ಲೆಯ ಮೇಲೆ ದಬ್ಬಾಳಿಕೆ ಸಲ್ಲದು, ಜಿಲ್ಲೆಯೇ ಮುಳುಗುವಂತ ಸ್ಥಿತಿಯಲ್ಲಿದ್ದು, ಸರಕಾರದ ವಿರುದ್ಧ ಜನರು ಹೋರಾಟಕ್ಕಿಳಿಯಬೇಕಿದೆ ಎಂದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನುಸೋಮಯ್ಯ ಮಾತನಾಡಿ ಈ ಕಾಮಗಾರಿಗೆ ಸುಮಾರು 100ಕೋಟಿ ವೆಚ್ಚದಲ್ಲಿ ಯೋಜನೆಯನ್ನು ತಯಾರು ಮಾಡಲಾಗಿದ್ದು 40-50 ಅಡಿ ಅಗಲ, 20 ಅಡಿ ಆಳ ಹಾಗೂ 5 ಮೀಟರ್ ಎತ್ತರದ ಕಾಲುವೆಯನ್ನು ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಆದರೆ ವಾಸ್ತವದಲ್ಲಿ ಇದಕ್ಕಿಂತಲೂ ಎತ್ತರದ ಕಟ್ಟೆಯನ್ನು ನಿರ್ಮಾಣ ಮಾಡುವ ಸಾಧÀ್ಯತೆಯಿದ್ದು ಇದನ್ನು ಕೂಡಲೇ ತಡೆಹಿಡಿಯಬೇಕಾಗಿದೆ ಎಂದರು.

ಈ ಕಾಮಗಾರಿಯನ್ನು ತಡೆಹಿಡಿಯುವ ನಿಟ್ಟಿನಲ್ಲಿ ಈ ಭಾಗದ ಗ್ರಾ.ಪಂ., ತಾ.ಪಂ. ಮತ್ತು ಜಿಲ್ಲಾ ಪಂಚಾಯತಿಯಲ್ಲಿ ಇದರ ಬಗ್ಗೆ ನಿರ್ಣಯವನ್ನು ಕೈಗೊಳ್ಳಲು ಸೂಚಿಸಲಾಯಿತು. ಈ ಹೋರಾಟ ವನ್ನು ಗ್ರಾಮ ಮಟ್ಟದಿಂದಲೆ ಬಲಪಡಿಸುವ ನಿಟ್ಟಿನಲ್ಲಿ ಅಯಾಯ ಗ್ರಾ.ಪಂ ಗಳಿಗೆ ಭೇಟಿ ನೀಡಿ ಜನಾಂದೋಲನ ಮಾಡುವಂತೆ ಸಭೆ ತೀರ್ಮಾನವನ್ನು ತೆಗೆದುಕೊಂಡಿತು.

ಕಾರ್ಯಕ್ರಮವನ್ನು ಅಯೋಜಿಸಲು ಸಂಚಾಲಕರಾಗಿ ಕಡೇಮಾಡ ಅಶೋಕ್, ತೀತಮಾಡ ಲಾಲ ಭೀಮಯ್ಯ, ಕಡೇಮಾಡ ಕುಸುಮಾ ಜೋಯಪ್ಪ, ಚೇಂದಿರ ರಘುತಿಮ್ಮಯ್ಯ, ಮತ್ರಂಡ ರೇಖಾ ಪೊನ್ನಪ್ಪ, ಬೊಳಿಯಂಗಡ ದಾದು ಪೂವಯ್ಯ, ಹೊಟ್ಟೇಂಗಡ ನಾರಾಯಣ್ ಇವರುಗಳನ್ನು ಆಯ್ಕೆ ಮಾಡಲಾಯಿತು.