ಗೋಣಿಕೊಪ್ಪಲು, ಫೆ. 6 : ಮೀಸೆಲ್ಸ್ ರುಬೆಲ್ಲಾ ಲಸಿಕೆ ಅಭಿಯಾನ ಯಶಸ್ವಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಹೇಳಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮೀಸೆಲ್ಸ್‍ಗೆ ಚಿಕಿತ್ಸೆ ಪಡೆದುಕೊಂಡಿರುವ ಮಕ್ಕಳ ಪೋಷಕರು ಸರ್ಕಾರದ ಮೀಸೆಲ್ಸ್ ರುಬೆಲ್ಲಾ ಲಸಿಕೆ ಪಡೆಯಬೇಕೇ ಎಂಬ ಗೊಂದಲದಲ್ಲಿದ್ದಾರೆ. ಒಮ್ಮೆ ಮಾತ್ರ ಇಂತಹ ಲಸಿಕೆಯನ್ನು ನೀಡಲು ಮುಂದಾಗಿರುವದರ ಪ್ರಯೋಜನ ಪಡೆದುಕೊಳ್ಳಬೇಕು. ರುಬೆಲ್ಲಾ ಎಂಬ ಲಸಿಕೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕಿದೆ. ಪೋಷಕರು ಈ ಬಗ್ಗೆ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು ಎಂದರು.

ಹುಟ್ಟುವ ಮಕ್ಕಳ ಅಂಗವೈಕಲ್ಯತೆ ತಡೆಯಲು ಇಂತಹ ಲಸಿಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಪೋಷಕರು ಯಾವದೇ ಬೇಡದ ಸಂದೇಶಗಳಿಗೆ ಒಳಗಾಗದೆ ಮಕ್ಕಳ ದೈಹಿಕ ರಕ್ಷಣೆಗೆ ಮುಂದಾಗಬೇಕಿದೆ ಎಂದರು. ತಾಲೂಕಿನಲ್ಲಿ 32, 410 ಲಸಿಕಾ ಗುರಿ ಸಾಧಿಸಲದೆ ಎಂದರು. ಈ ಸಂದರ್ಭ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ ಹಾಗೂ ಗೋಣಿಕೊಪ್ಪ ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಉಪಸ್ಥಿತರಿದ್ದರು.