ಸುಂಟಿಕೊಪ್ಪ, ಫೆ. 6: ಆಕ್ರಮ ಮರಳು ಗಣಿಗಾರಿಕೆ ಕೆಲ ಗ್ರಾಮ ಪಂಚಾಯಿತಿಯಲ್ಲಿ ರಾಜಾರೋಷ ವಾಗಿ ಎಗ್ಗಿಲ್ಲದೆ ನಡೆಯುತ್ತಿದ್ದ ಸರಕಾರದ ಬೊಕ್ಕÀಸಕ್ಕೆ ಖೋತಾ ಆಗುತ್ತಿದ್ದರೂ ಗ್ರಾ. ಪಂ. ಆಡಳಿತ ದವರು ಕೈಕಟ್ಟಿ ಕುಳಿತಿರುವದು ಕಾಣಬಹುದಾಗಿದೆ. ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬೂರು ಚಿಕ್ಕಾದ್ರೆ, ಹಟ್ಟಿಹೊಳೆ, ಬಿಜಾಂಬಿ ಮೂವತ್ತೋಕ್ಲು, ಹರದೂರು ಗ್ರಾಮ ಪಂಚಾಯಿತಿಯ ಹೊಸತೋಟ, ಗರಗಂದೂರು, ಮಕ್ಕಂದೂರು ಗ್ರಾಮ ಪಂಚಾಯಿತಿಯ ಮುಕ್ಕೋಡ್ಲು, ಐಗೂರು ಗ್ರಾಮ ಪಂಚಾಯಿತಿಯ ಐಗೂರು ಕಿರಗಂದೂರು ಗ್ರಾಮ ಪಂಚಾಯಿತಿ ವಿಭಾಗದಲ್ಲಿ ಆಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿರುವದು ದಿನನಿತ್ಯ ಕಾಣಬಹುದಾಗಿದೆ.

ತೋಳ್ಬಲ, ಹಣಬಲ ಇರುವ ವರೇ, ಕಾರ್ಮಿಕರನ್ನು ಕರೆದೊಯ್ದು ಹೊಳೆಯಿಂದ ಮರಳು ತೆಗೆಸಿ ಟ್ರ್ಯಾಕ್ಟರ್ ಹಾಗೂ ಟಿಪ್ಪರ್, ಪಿಕ್‍ಅಪ್‍ನಲ್ಲಿ ತುಂಬಿಸಿ ಬೇಕಾದ ವರಿಗೆ ಮಾರಾಟ ಮಾಡುತ್ತಿದ್ದಾರೆ. ಮರಳು ಗಣಿಗಾರಿಕೆಗೆ ಪೈಪೋಟಿಗೆ ಬಿದ್ದು ಗುಂಪುಗಳ ನಡುವೆ ಆಗಾಗ್ಗೆ ಗಲಾಟೆ ಸಂಭವಿಸುತ್ತಿರುತ್ತದೆ.

ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಹೊಸತೋಟ ಗರಗಂದೂರಿನಲ್ಲಿ ಆಕ್ರಮ ಮರಳು ಸಾಗಾಣಿಕೆ ಮಾಡುತ್ತಿರುವ ಹಲವಾರು ಟ್ರ್ಯಾಕ್ಟರ್ ಹಾಗೂ ಟಿಪ್ಪರ್ ಹಾಗೂ ಪಿಕ್‍ಅಪ್ ವಾಹನಗಳನ್ನು ಕಾರ್ಯಾಚರಣೆ ನಡೆಸಿ ವಶಪಡಿಸಿ ಕೊಂಡು ಕ್ರಮ ಕೈಗೊಂಡಿದ್ದಾರೆ.

ಆದರೆ ಮಾದಾಪುರ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಯವರಾಗಲಿ ಕಂದಾಯ ಇಲಾಖೆ, ಪೊಲೀಸರಾಗಲಿ ಆಕ್ರಮ ಮರಳು ಗಣಿಗಾರಿಕೆ ದಂಧೆಯನ್ನು ತಡೆಗಟ್ಟಿ ಸರಕಾರದ ಬೊಕ್ಕಸಕ್ಕೆ ಬರಬೇಕಾದ ಆದಾಯ ತಂದು ಕೊಡುವಲ್ಲಿ ಆಸಕ್ತಿ ವಹಿಸದೆ ಇರುವದರಿಂದ ಮರಳು ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ.

ಸರಕಾರಿ ಕಟ್ಟಡ, ಮನೆ ನಿರ್ಮಾಣ, ಖಾಸಗಿ ಕಟ್ಟಡ ನಿರ್ಮಾಣಕ್ಕೆ ಮರಳು ಅಗತ್ಯವಾಗಿದೆ. ಸರಕಾರದ ನೂತನ ಮರಳು ನೀತಿಯಂತೆ ಕೊಡಗಿನ ನದಿ ತಟಗಳಲ್ಲಿ ಕೆಲ ನಿರ್ಧಿಷ್ಟ ಪ್ರದೇಶದಲ್ಲಿ ಮಾತ್ರ ಮರಳು ತೆಗೆಯಲು ಕೊಡಗಿನ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಭೂ ವಿಜ್ಞಾನಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ಇ. ಟೆಂಡರ್ ಅಧಿಸೂಚನೆ ಹೊರಡಿಸಿದೆ.

ಮಡಿಕೇರಿ,ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕುಗಳ ಮರಳು ಉಸ್ತುವಾರಿ ಸಮಿತಿ ವತಿಯಿಂದ ನದಿ ಪಾತ್ರಗಳಲ್ಲಿ ಲಭ್ಯವಿರುವ ಮರಳು ನಿಕ್ಷೇಪಗಳ ಪ್ರದೇಶಗಳನ್ನು ಪರೀಶಿಲಿಸಿ ಮರಳು ನಿಕ್ಷೇಪಗಳನ್ನು ಗುರುತಿಸಿದ್ದು. ನಿಕ್ಷೇಪಗಳಿಗೆ ಕರ್ನಾಟಕ ಉಪ ಖನಿಜ ರಿಯಾಯಿತಿ ತಿದ್ದುಪಡಿ ನಿಯಮ 2016ರ ಉಪ ನಿಯಮ 31ಎಸ್‍ರನ್ವಯ ಮರಳು ಸಮಿತಿಯಿಂದ ಮೀಸಲಾತಿ ನಿಗದಿಪಡಿಸಿದೆ. ಈ ಹರಾಜು ಮೂಲಕ ಗುತ್ತಿಗೆ ಪಡೆದು ಗರಿಷ್ಠ ಮಾರಾಟ ದರಕ್ಕನುಗುಣವಾಗಿ ಮರಳು ತೆಗೆಯಲು ಅವಕಾಶವಿದೆ.

ಆನಂತರವೂ ನದಿಪಾತ್ರ ಗಳಿಂದ ಆಕ್ರಮ ಮರಳು ಮಾಫಿಯ ದವರು ಮರಳು ತೆಗೆದರೆ ಜಿಲ್ಲಾಡಳಿತ ಪೊಲೀಸರು ಗ್ರಾ.ಪಂ. ನವರು ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಈ ದಂಧೆಗೆ ಕಡಿವಾಣ ಹಾಕಬಹುದು. ಸರಕಾರದ ಬೊಕ್ಕಸಕ್ಕೂ ಆದಾಯ ತಂದು ಕೊಡಲು ಸಾಧ್ಯವಿದೆ.