ಮಡಿಕೇರಿ, ಫೆ. 6: ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ, ಕೊಡವ ಲ್ಯಾಂಡ್ ಸ್ವಾಯತ್ತತೆ, ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 – 342 ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು ಹಾಗೂ ನಕ್ಸಲ್ ಮಾವೋವಾದಿ ರೆಡ್ ಕಾರಿಡಾರ್ – ಐಎಸ್‍ಐಎಸ್ ವಾದಿಗಳ ಗ್ರೀನ್ ಘಜ್ವಾ ತುರ್ ಹಿಂದ್ ಕಾರಿಡಾರ್ ಪಿತೂರಿಯ ಮೂಲಕ ಕೊಡವ ಕುಲವನ್ನು ಮೂಲೋತ್ಪಾಟನೆ ಮಾಡಲು ಹೊಂಚು ಹಾಕುತ್ತಿರುವ ಅಂತರರಾಷ್ಟ್ರೀಯ ಭಯೋತ್ಪಾದನೆ ನಿಗ್ರಹಿಸಬೇಕೆಂದು, ಅದಕ್ಕಾಗಿ ಕೊಡವರಿಗೆ ಸಂವಿಧಾನ ಖಾತ್ರಿ ಬೇಕೆಂದು ಅಗ್ರಹಿಸಿ ಬಿರುನಾಣಿ ಬಸ್ ನಿಲ್ದಾಣದಲ್ಲಿ ಸಿ.ಎನ್.ಸಿ ಆಶ್ರಯದಲ್ಲಿ ಮಾನವ ಸರಪಳಿ ಹಾಗೂ ಜನಜಾಗೃತಿ ಸಭೆ ನಡೆಯಿತು.ಕಾರ್ಯಕ್ರಮದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಮಾತನಾಡಿ, ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ, ಕೊಡವ ಲ್ಯಾಂಡ್ ಸ್ವಾಯತ್ತತೆ, ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340-342ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸುವದರ ಮೂಲಕ ಕೊಡವರಿಗೆ ದೈಹಿಕ ರಕ್ಷಣೆ, ಆರ್ಥಿಕ ಭದ್ರತೆ ಮತ್ತು ಭೂಮಿಯ ಹಕ್ಕು ಅಭಾದಿತವಾಗಿ ಮುಂದುವರೆಯ ಬೇಕು. ಕೊಡÀವರ ಸಾಂಪ್ರದಾಯಿಕ ಆವಾಸ ನೆಲೆಗೆ ರಾಜ್ಯಾಂಗ ಖಾತರಿ ದೊರಕುವದರ ಮೂಲಕ ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ಪಟ್ಟಿಯಲ್ಲಿ ಸೇರಿಸಬೇಕು ಹಾಗೂ ನಕ್ಸಲ್ ಮಾವೋವಾದಿಗಳು ಮತ್ತು ಐಎಸ್‍ಐಎಸ್ ರ್ಯಾಡಿಕಲ್ ಭಯೋತ್ಪಾದಕರು ಕೊಡಗನ್ನು ರೆಡ್ ಕಾರಿಡಾರ್ ಮತ್ತು ಘಜ್ವಾ ತುರ್ ಹಿಂದ್ ಗ್ರೀನ್ ಕಾರಿಡಾರ್ ಮಾಡಲು ಸಂಚು ರೂಪಿಸಿದ್ದು ಅದಕ್ಕಾಗಿ ಇವರಿಗೆ ತಡೆಯಾಗಿರುವ ಆದಿಮಸಂಜಾತ ಕೊಡವ ಬುಡಕಟ್ಟು ಕುಲವನ್ನು ಕೊಡಗಿನಿಂದಲೇ ಮೂಲೋತ್ಪಾಟನೆ ಮಾಡಲು ರೂಪಿಸಿರುವ ಅಂತರರಾಷ್ಟ್ರೀಯ ಪಿತೂರಿಯ ವಿರುದ್ಧ ಸಿ.ಎನ್.ಸಿ. ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಬೊಟ್ಟಂಗಡ ರಾಜು ಅವರು ಮಾತನಾಡಿ, ಸಿ.ಎನ್.ಸಿ. 27 ವರ್ಷಗಳಿಂದ ಕೊಡವರ ಧ್ವನಿಯಾಗಿ ಹೋರಾಡುತ್ತಿರುವ ಸಂಘಟನೆ. ಅದನ್ನು ಯಾವದೇ ಸಂಶಯವಿಲ್ಲದೆ ಬೆಂಬಲಿಸಿ ಅದರ ಹೋರಾಟದಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬೊಟ್ಟಂಗಡ ಗಿರೀಶ್, ಕೀಕಣಮಾಡ ನಾಣಯ್ಯ, ಚೊಟ್ಟಂಗಡ ಸತ್ಯಪಾಲ್, ಅಣ್ಣಳಮಾಡ ಗಿರೀಶ್, ಕೀಕಣಮಾಡ ರತನ್ ಚಂಗಪ್ಪ, ಕುಪ್ಪಣಮಾಡ ಬೊಳಿಕಟ್ಟಿ, ಕುಪ್ಪಣಮಾಡ ಪೊನ್ನು, ಕಳಕಂಡ ಪ್ಯಾರಿ, ಕುಪ್ಪಣಮಾಡ ಪ್ರೀತಂ, ಬೊಟ್ಟಂಗಡ ಸವಿತ, ಕಳಕಂಡ ಶಯನ, ಕಳಕಂಡ ಸುಶೀಲ, ಬೊಟ್ಟಂಗಡ ವಾಣಿ, ಬೊಜ್ಜಂಗಡ ನಟರಾಜ್, ಬಲ್ಯಮೀದೇರಿರ ಸುರೇಶ್, ಮೂಕಳಮಾಡ ಈರಪ್ಪ, ಬೊಳ್ಳೆರ ಮುತ್ತಣ್ಣ, ಗುಡ್ಡಮಾಡ ಅಪ್ಪಿ, ಬಾಚಿರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಅಪ್ಪೇಂಗಡ ಮಾಲೆ ಮುಂತಾದವರು ಭಾಗವಹಿಸಿದ್ದರು. ಈ ಸಂದರ್ಭ ಗುರುಕಾರೋಣ ಮತ್ತು ಸೂರ್ಯ ಚಂದ್ರರ ಹೆಸರಿನಲ್ಲಿ ಕೊಡವ ಲ್ಯಾಂಡ್ ಹೋರಾಟಕ್ಕೆ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.