ಶ್ರೀಮಂಗಲ, ಫೆ. 8: ಹುದಿಕೇರಿ ಗ್ರಾ.ಪಂ.ಗೆ ಕಳೆದ 20 ತಿಂಗಳಿನಿಂದ 5 ಪಿ.ಡಿ.ಓ.ಗಳನ್ನು ನಿಯೋಜಿಸಿ ನಂತರದಲ್ಲಿ ಬೇರೆಡೆಗೆ ವರ್ಗಾಯಿಸಲಾಗಿದೆ. ಇದರಿಂದ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ. ದಿನನಿತ್ಯ ಸಾರ್ವಜನಿಕರಿಗೆ ಬೇಕಾಗುವ ವಿವಿಧ ದೃಢೀಕರಣ ಪತ್ರ ಇತ್ಯಾದಿಗಳು ದೊರೆಯದೆ ತೊಂದರೆಯಾಗಿದೆ. ಆದ್ದರಿಂದ ಪಂಚಾಯಿತಿಗೆ ಖಾಯಂ ಪಿ.ಡಿ.ಓ. ನೇಮಕಕ್ಕೆ ಒತ್ತಾಯಿಸಿ ತಾ. 9 ರಂದು (ಇಂದು) ಹುದಿಕೇರಿ ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವದೆಂದು ಗ್ರಾ.ಪಂ. ಅಧ್ಯಕ್ಷೆ ರೇಖಾ ಪೊನ್ನಪ್ಪ ಹಾಗೂ ಸದಸ್ಯರು ಲಿಖಿತ ಪತ್ರವನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್ ಫಡ್ನೇಕರ್ ಅವರಿಗೆ ಸಲ್ಲಿಸಿ ಒತ್ತಾಯಿಸಿದ್ದಾರೆ.

ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ ಅಚ್ಯುತ್ತನ್ ಅವರ ನೇತೃತ್ವದಲ್ಲಿ ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಪಂಚಾಯಿತಿಗೆ ಖಾಯಂ ಪಿ.ಡಿ.ಓ. ನೇಮಕ ಮಾಡುವರೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಲಿಖಿತ ಹೇಳಿಕೆಯಲ್ಲಿ ತಿಳಿಸಲಾಗಿದೆ.