ಮಡಿಕೇರಿ, ಫೆ. 8: ಕೊಡವ ಕುಟುಂಬಗಳ ನಡುವೆ ಮುಂದಿನ ಏಪ್ರಿಲ್ ಮೇ ತಿಂಗಳಿನಲ್ಲಿ ನಡೆಯಲಿ ರುವ ಬಿದ್ದಾಟಂಡ ಕಪ್ ಹಾಕಿ ಉತ್ಸವಕ್ಕೆ ರಾಜ್ಯ ಸರಕಾರದಿಂದ ರೂ. 40ಲಕ್ಷ ಅನುದಾನ ಮಂಜೂರು ಮಾಡಲು ಸಿ.ಎಂ. ಸಿದ್ದರಾಮಯ್ಯ ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.ಇಂದು ಬೆಂಗಳೂರಿನಲ್ಲಿ ಪ್ರಮುಖರು ಹಾಗೂ ಬಿದ್ದಾಟಂಡ ಕುಟುಂಬದವರನ್ನು ಒಳಗೊಂಡ ನಿಯೋಗದೊಂದಿಗೆ ಚರ್ಚಿಸಿದ ಬಳಿಕ ಸಿದ್ದರಾಮಯ್ಯ ಅವರು ಕಳೆದ ವರ್ಷದಂತೆ ಈ ಬಾರಿಯೂ 40ಲಕ್ಷ ನೀಡಲು ಒಪ್ಪಿಗೆ ಸೂಚಿಸಿದರು. ತಕ್ಷಣವೇ ಅನುದಾನ ಬಿಡುಗಡೆ ಮಾಡಲು ಕ್ರಮಕೈಗೊಳ್ಳುವಂತೆ ಸೂಚಿಸಿ ಸಹಿ ಹಾಕಿದ ಅವರು ಈ ಬಗ್ಗೆ ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್, ಪಶು ಸಂಗೋಪನೆ ಸಚಿವ

(ಮೊದಲ ಪುಟದಿಂದ) ಎ. ಮಂಜು, ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಮನೆಯಪಂಡ ಪೊನ್ನಪ್ಪ, ನಾಪಂಡ ಮುತ್ತಪ್ಪ ನಿಯೋಗದಲ್ಲಿ ಪಾಲ್ಗೊಂಡಿದ್ದರು. ನಿಯೋಗದಲ್ಲಿ ಬಿದ್ದಾಟಂಡ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ್ ಚಂಗಪ್ಪ, ಪದಾಧಿಕಾರಿಗಳಾದ ಬಿ.ಎಸ್. ತಮ್ಮಯ್ಯ, ಬೆಲ್ಲು ಬೆಳ್ಯಪ್ಪ, ಜೀವನ್ ಕಾರ್ಯಪ್ಪ, ಸುಜನ್ ನಂಜಪ್ಪ, ಪವನ್ ಮುತ್ತಪ್ಪ, ಹರ್ಷಿತ್ ಸೋಮಯ್ಯ, ಪುತ್ತರಿರ ಪಪ್ಪು ತಿಮ್ಮಯ್ಯ, ಕೊಂಗಂಡ ನವೀನ್ ಪೂಣಚ್ಚ ತೆರಳಿದ್ದರು.