ಸಿದ್ದಾಪುರ, ಫೆ. 8: ಗ್ರಾಮದ ಅಭಿವೃದ್ಧಿಯ ಬಗ್ಗೆ ಪ್ರಶ್ನಿಸಿರುವದನ್ನು ಅಪ್ರಬುದ್ಧ ಸದಸ್ಯ ಎಂದು ಹೇಳಿಕೆ ನೀಡಿರುವದನ್ನು ಸಿದ್ದಾಪುರ ಗ್ರಾ.ಪಂ ಸದಸ್ಯ ಶಿವಕುಮಾರ್ ಖಂಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿ ಅವರು, ಇತ್ತೀಚೆಗೆ ನಡೆದ ಸಿದ್ದಾಪುರ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಗ್ರಾಮದಲ್ಲಿ ಕಸದ ವಿಲೇವಾರಿಯ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿ ವಿಚಾರವನ್ನು ಮುಂದಿಟ್ಟುಕೊಂಡು ತನ್ನನ್ನು ಅಪ್ರಬುದ್ಧ ಸದಸ್ಯ ಎಂದಿರುವದು ವಿಷಾದನೀಯ.

ಸದಸ್ಯರು ರಾಜೀನಾಮೆ ಕೇಳಿದ ಕೂಡಲೇ ಅಧ್ಯಕ್ಷರು ರಾಜೀನಾಮೆಯನ್ನು ಅಭಿವೃದ್ಧಿ ಅಧಿಕಾರಿಗೆ ನೀಡಿರುವದು ಪ್ರಬುದ್ಧತೆಯೇ ಎಂದು ಪ್ರಶ್ನಿಸಿದ್ದಾರೆ. ತಾನು ಕಾಂಗ್ರೆಸ್ ಪಕ್ಷದ ಎಸ್.ಸಿ ಸೆಲ್‍ನ ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದು, ತನ್ನ ಏಳಿಗೆಯನ್ನು ಸಹಿಸದ ಕೆಲವು ಪಟ್ಟಭದ್ರ ಹಿತಶತ್ರುಗಳು ತನ್ನ ವಿರುದ್ಧ ಷಡ್ಯಂತರ ನಡೆಸಿ, ತನ್ನ ವಿರುದ್ಧ ಪಿತೂರಿ ನಡೆಸಿ ಹೆಸರಿಗೆ ಕಳಂಕ ತರಲು ಹುನ್ನಾರ ನಡೆಸುತ್ತಿದ್ದಾರೆ ಎಂದಿದ್ದಾರೆ.