ಕೂಡಿಗೆ, ಫೆ. 8: ಕೂಡಿಗೆಯ ಗ್ರಾ. ಪಂ.ಯ ಮೊದಲನೆ ವಾರ್ಡಿನ ವಾರ್ಡ್ ಸಭೆ ಗ್ರಾ.ಪಂ. ಸದಸ್ಯೆ ಕೆ.ಜಿ. ಮೋಹಿನಿ ಅಧ್ಯಕ್ಷತೆಯಲ್ಲಿ ನಡೆಯಿತು.

ಶುಚಿತ್ವಕ್ಕೆ ಸಂಬಂಧಿಸಿದಂತೆ ಕೆ.ಕೆ. ನಾಗರಾಜ ಶೆಟ್ಟಿ, ಗೋವಿಂದರಾಜ್, ಕೃಷ್ಣ ಮೊದಲಾದವರು ವಿಷಯ ಪ್ರಸ್ತಾಪಿಸಿ, ಕೋಳಿ ಹಾಗೂ ಮಾಂಸದ ಅಂಗಡಿಗಳಲ್ಲಿ ಶುಚಿತ್ವಕ್ಕೆ ಸಂಬಂಧಿಸಿ ದಂತೆ ಟೆಂಡರುದಾರರಿಗೆ ವ್ಯವಸ್ಥೆಗಳನ್ನು ಸರಿಪಡಿಸಲು ಗ್ರಾ. ಪಂ.ಗೆ ಸೂಚಿಸಬೇಕು. ಗ್ರಾ. ಪಂ. ಹಣ ಪೋಲಾಗದಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ರವಿ ಮಾತನಾಡಿ, ಈ ವಿಚಾರಗಳನ್ನು ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯಲ್ಲಿ ಚರ್ಚಿಸಲಾಗಿದ್ದು, ಗ್ರಾಮಸ್ಥರಿಗೆ ಅನುಕೂಲಕರವಾಗುವ ರೀತಿಯಲ್ಲಿ ತುರ್ತಾಗಿ ಕ್ರಮ ಕೈಗೊಳ್ಳಲಾಗುವದು ಎಂದರು.

ಸಭೆಯಲ್ಲಿ ಗ್ರಾ. ಪಂ. ಸದಸ್ಯರಾದ ರಾಮಚಂದ್ರ, ರವಿ, ರತ್ನಮ್ಮ, ಅಭಿವೃದ್ಧಿ ಅಧಿಕಾರಿ ರವೀಶ್, ಕಾರ್ಯದರ್ಶಿ ಸಣ್ಣಸ್ವಾಮಿ ಸೇರಿದಂತೆ ಗ್ರಾಮಸ್ಥರುಗಳು ಉಪಸ್ಥಿತರಿದ್ದರು.