ಮಡಿಕೇರಿ, ಫೆ. 8: ಗೋ ಗ್ರೀನ್ ಮೂರ್ನಾಡು ಸಂಘಟನೆಯ ವತಿಯಿಂದ ಸ್ವಚ್ಛತೆ ಕಾಪಾಡುವದರ ಮೂಲಕ ಉತ್ತಮ ಪರಿಸರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸಲು ಇಂದು ಮೂರ್ನಾಡುವಿನಿಂದ ಮಡಿಕೇರಿ ತನಕ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಗೋ ಗ್ರೀನ್ ಮೂರ್ನಾಡು ಸಂಘಟನೆ ಮೂರ್ನಾಡು ಹಾಗೂ ಮಡಿಕೇರಿಯ ಲಯನ್ಸ್ ಕ್ಲಬ್‍ನ ಸಹಕಾರದೊಂದಿಗೆ ಈ ಕಾರ್ಯ ಹಮ್ಮಿಕೊಂಡಿತ್ತು. ಜಾಥಾದಲ್ಲಿ ಸಂಘಟನೆಯ ಪ್ರಮುಖರೊಂದಿಗೆ ಮೂರ್ನಾಡುವಿನ ಮಾರುತಿ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಈ ಜಾಥಾವನ್ನು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜನರಲ್ ತಿಮ್ಮಯ್ಯ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಬರಮಾಡಿಕೊಂಡರು. ಬಳಿಕ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ಮಕ್ಕಳೊಂದಿಗೆ ವಿಚಾರ - ವಿನಿಮಯ ನಡೆಸಿ ಜನಜಾಗೃತಿ ಮೂಡಿಸಲಾಯಿತು.

ಈ ಸಂದರ್ಭ ಬಡುವಂಡ ಅರುಣ್ ಅಪ್ಪಚ್ಚು, ಕಂಬೀರಂಡ ಗೌತಮ್, ಪಳಂಗಂಡ ಅಪ್ಪಣ್ಣ, ಮುಕ್ಕಾಟಿರ ಕರುಂಬಯ್ಯ, ಮೂರ್ನಾಡು ಲಯನ್ಸ್ ಅಧ್ಯಕ್ಷ ಸಿಮ್ಸ್ ಮಂದಣ್ಣ, ಚೇಂಬರ್ ಆಫ್ ಕಾಮರ್ಸ್‍ನ ಮೊಂತಿಗಣೇಶ್, ಅಂಬೆಕಲ್ ನವೀನ್, ಜಿ. ಚಿದ್ವಿಲಾಸ್, ಬಾಬುಚಂದ್ರ ಉಳ್ಳಾಗಡ್ಡಿ, ಮಡಿಕೇರಿ ಲಯನ್ಸ್‍ನ ಮಧುಕರ್ ಶೇಟ್, ಜಯರಾಜ್, ಪೆಮ್ಮುಡಿಯಂಡ ಅಪ್ಪಣ್ಣ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ, ತಿಮ್ಮಯ್ಯ ಶಾಲೆಯ ಪ್ರಮುಖ ಮಣವಟ್ಟಿರ ಚಿಣ್ಣಪ್ಪ, ಪ್ರಾಂಶುಪಾಲೆ ಕಲ್ಮಾಡಂಡ ಸರಸ್ವತಿ ಮತ್ತಿತರರು ಭಾಗಿಗಳಾಗಿದ್ದರು.