ಸಿದ್ದಾಪುರ, ಫೆ. 8 : ಮಾಲ್ದಾರೆ ಸಮೀಪದ ದಿಡ್ಡಳ್ಳಿ ನಿವಾಸಿ, ಜೆ.ಕೆ. ಅಪ್ಪಾಜಿ ಮೇಲೆ ಹಲ್ಲೆ ನಡೆಸಲು ಯತ್ನಿಸಿರುವ ಬಗ್ಗೆ ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಆದಿವಾಸಿ ಮುಖಂಡ ಜೆ.ಕೆ ಅಪ್ಪಾಜಿ ಪುಕಾರು ನೀಡಿದ್ದಾರೆ.

ತಾ. 7 ರಂದು ಅಪ್ಪಾಜಿ ರಾತ್ರಿ 9.30ರ ಸಮಯಕ್ಕೆ ಪಿರಿಯಾಪಟ್ಟಣದಿಂದ ಮಾಲ್ದಾರೆ ದಿಡ್ಡಳಿಗೆ ತನ್ನ ಓಮಿನಿ ವ್ಯಾನಿನಲ್ಲಿ ಬರುತ್ತಿರುವ ಸಂದರ್ಭ ಗದ್ದಿಗೆ ಬೆಟ್ಟ ದೇವಸ್ಥಾನದ ಬಳಿ ಅಪರಿಚಿತರು ಜಿಪ್ಸಿ ವಾಹನವೊಂದರಲ್ಲಿ ವಾಹನವನ್ನು ಬೆನ್ನಟ್ಟಿ ಹಲ್ಲೆ ನಡೆಸಲು ಯತ್ನಿಸಿದರಲ್ಲದೆ, ವಾಹನದಲ್ಲಿ ಆಗಮಿಸಿದ ವ್ಯಕ್ತಿಗಳ ಬಳಿ ಕೋವಿ ಹಾಗೂ ಮಾರಕಾಯುಧಗಳು ಇದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ. ತನಗೆ ಜೀವ ಭಯವಿದ್ದು, ತನಗೆ ಪೊಲೀಸ್ ರಕ್ಷಣೆ ಕಲ್ಪಿಸಿಕೊಡಬೇಕೆಂದು ಅಪ್ಪಾಜಿ ಮನವಿ ಮಾಡಿದ್ದಾರೆ. ಹಲ್ಲೆ ನಡೆಸಲು ಯತ್ನಿಸಿದ ವ್ಯಕ್ತಿಗಳನ್ನು ಕೂಡಲೇ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಕೋರಿದ್ದಾರೆ.