ಮಡಿಕೇರಿ, ಫೆ. 9: ಮಡಿಕೇರಿ ಕ್ಷೇತ್ರ ಸಮಿತಿ ವತಿಯಿಂದ 3 ನೇ ವರ್ಷದ ಆಟೋಟ ಸ್ಪರ್ಧೆ ನಗರದ ಹಿಂದೂಸ್ತಾನಿ ಶಾಲೆ ಮೈದಾನದಲ್ಲಿ ವಸಂತ ಕುಲಾಲ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸೂಜಿಗೆ ದಾರ ಹಾಕುವದರ ಮೂಲಕ ಕ್ರೀಡಾಕೂಟವನ್ನು ನಗರಸಭೆ ಸದಸ್ಯರಾದ ಕೆ.ಜಿ. ಪೀಟರ್, ಪ್ರಕಾಶ್ ಆಚಾರ್ಯ, ಜುಲೇಕಾಬಿ ಮತ್ತು ಗಣ್ಯರು ಉದ್ಘಾಟಿಸಿದರು.

ನಂತರ ಇತರ ಸ್ಪರ್ಧೆಗಳಾದ ದಾರದ ರೋಲ್‍ಗಳಿಂದ ಪಿರಮಿಡ್ ನಿರ್ಮಾಣ, ಥರ್ಮಕೋಲ್ ಶೀಟ್‍ನಲ್ಲಿ 5 ಸೂಜಿಗಳನ್ನು ನಿಲ್ಲಿಸಿ ದಾರ ಪೋಣಿಸುವದು, 100 ಮೀ. ಓಟ ಪುರುಷ ಮತ್ತು ಮಹಿಳೆಯರಿಗೆ, ಹಗ್ಗ ಜಗ್ಗಾಟ ಮಹಿಳೆಯರಿಗೆ ಮತ್ತು ಪುರುಷರಿಗೆ, ಮಕ್ಕಳಿಗೆ 100 ಮೀ. ಓಟ, ನಿಂಬೆ ಚಮಚದ ಓಟ, ನಿಧಾನಗತಿಯ ದ್ವಿಚಕ್ರ ವಾಹನ ಚಾಲನೆ, ವೇಗದ ನಡಿಗೆ, ಇಟ್ಟಿಗೆ ಎತ್ತುವ ಸ್ಪರ್ಧೆಗಳು ನಡೆದವು.

ಈ ಸಂದರ್ಭದಲ್ಲಿ ಕೆ.ಎಸ್.ಟಿ.ಎ. ರಾಜ್ಯ ಸಮಿತಿ ಸಹ ಕಾರ್ಯದರ್ಶಿ ಶೇಟ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಅಷ್ರಫ್‍ನ್ನೀಸ, ಕೋಶಾಧಿಕಾರಿ ಸುಧಾಕರ, ವಲಯ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಮತ್ತು ಮೂರ್ನಾಡು ವಲಯ ಸಮಿತಿ ಅಧ್ಯಕ್ಷರಾದ ಜಯರಾಮ, ವಿಠಲ, ಸುರೇಶ್ ರೈ, ಪ್ರಧಾನ ಕಾರ್ಯದರ್ಶಿ ಕವಿತ, ಕೋಶಾಧಿಕಾರಿ ಜಯಮಾಲ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಟೈಲರ್ ಸದಸ್ಯರು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಷ್ರಫ್‍ನ್ನೀಸ ವಂದಿಸಿದರು.