ಚೆಟ್ಟಳ್ಳಿ, ಫೆ. 9: ನವ ದೆಹಲಿಯಲ್ಲಿ ನಡೆದ ಅಖಿಲ ಭಾರತ ಥಲಸೈನಿಕ್ ಕ್ಯಾಂಪ್ ನಲ್ಲಿ( ಟಿ.ಸ್.ಸಿ) ಜೂನಿಯರ್ ರೈಫಲ್ ಶೂಟಿಂಗ್ .22 ವಿಭಾಗದಲ್ಲಿ ಕೊಡಗಿನ ಏನ್. ಸಿ . ಸಿ . ಹತ್ತೊಂಬತ್ತನೇ ಬೆಟಾಲಿಯನ್‍ನ, ಮಡಿಕೇರಿಯ ಭಾರತೀಯ ವಿದ್ಯಾಭವನದ ಒಂಬತ್ತನೇ ತರಗತಿಯ ವಿದ್ಯಾರ್ಥಿ ಪುತ್ತರಿರ .ಎಂ. ನಂಜಪ್ಪ ಸ್ಪರ್ಧಿಸಿ ಸಾಧನೆ ತೋರಿದ್ದಾನೆ.

2016 ನೇ ಸಾಲಿನಲ್ಲಿ ಮಡಿಕೇರಿಯಲ್ಲಿ ನಡೆದ ಎನ್.ಸಿ.ಸಿ. ಕ್ಯಾಂಪ್ ಸೆಲೆಕ್ಷನ್‍ನಲ್ಲಿ ಮೊದಲನೇ ಸ್ಥಾನವನ್ನು ಗಳಿಸಿ, ನಂತರ 2016 ನೇ ಮೇ ತಿಂಗಳಲ್ಲಿ ಮೂಡಬಿದಿರೆಯ ಆಳ್ವಾಸ್‍ನಲ್ಲಿ ನಡೆದ ಟಿ.ಸ್.ಸಿ. ಒಂದನೇ ಝೋನೆಲ್ ಕ್ಯಾಂಪಿನಲ್ಲಿ ಕೊಡಗು, ಉಡುಪಿ, ಮಂಗಳೂರು, ಶಿವಮೊಗ್ಗ, ಜಿಲ್ಲೆಯ ಸ್ಪರ್ಧಿಗಳ ಜೊತೆಯಲ್ಲಿ ಸ್ಪರ್ಧಿಸಿ ಮೊದಲನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾನೆ. ನಂತರದ ದಿನಗಳಲ್ಲಿ ನಡೆದ ಶಿವಮೊಗ್ಗದ ಟಿ.ಎಸ್.ಸಿ. ಎರಡನೇ ಕ್ಯಾಂಪಿನ ರೈಫಲ್ ಶೂಟಿಂಗಿನಲ್ಲಿ ಇನ್ನು ಹಲವಷ್ಟು ಜಿಲ್ಲೆಗಳ ಎನ್.ಸಿ.ಸಿ. ಸ್ಪರ್ಧಿಗಳ ಜೊತೆಯಲ್ಲಿ ಸ್ಪರ್ಧಿಸಿ ಅಲ್ಲಿಯೂ ಪ್ರಥಮ ಸ್ಥಾನ ಗಳಿಸಿಕೊಂಡು ನಂತರ ಬೆಳ್ಳಾರಿ, ವಿಜಾಪುರ, ಗೋವಾ ರಾಜ್ಯದಲ್ಲಿ ನಡೆದ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಕರ್ನಾಟಕ ಹಾಗೂ ಗೋವಾ ಡೈರೆಕ್ಟೊರೇಟ್ ಅನ್ನು ಪ್ರತಿನಿಧಿಸಿ, ನವದೆಹಲಿಯಲ್ಲಿ ನಡೆದ ನ್ಯಾಷನಲ್ ಲೆವೆಲ್ಲಿನ ಆಲ್ ಇಂಡಿಯಾ ಟಿ.ಸ್.ಸಿ.ಯನ್ನು ಪ್ರತಿನಿಧಿಸಿ ಎರಡನೇ ಸ್ಥಾನವನ್ನು ಗಿಟ್ಟಿಸಿಕೊಂಡು ಕರ್ನಾಟಕಕ್ಕೆ ಹಾಗೂ ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾನೆ.

ಈತನ ಪ್ರತಿಭೆಯನ್ನು ಗಮನಿಸಿದ ಜಿಲ್ಲಾಡಳಿತವು ಈ ವರ್ಷದ ಮಡಿಕೇರಿಯ ಕೋಟೆಯ ಆವರಣದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಕೊಡಗಿನ ಉಸ್ತುವಾರಿ ಸಚಿವರಾದಿ ಯಾಗಿ, ಈತನಿಗೆ ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಲಾಯಿತು. ಈತ ಚೆಟ್ಟಳ್ಳಿಯ ನಿವಾಸಿ ಕಾಫೀ ಬೆಳೆಗಾರರಾದ ಪುತ್ತರಿರ ರಾಜೇಶ್ ಮುತ್ತಪ್ಪ ಮತ್ತು ವನಿತಾ ಮುತ್ತಪ್ಪ ಅವರ ಪುತ್ರನಾಗಿದ್ದಾನೆ.