ಶನಿವಾರಸಂತೆ, ಫೆ. 9: ಸಮೀಪದ ಗುಡುಗಳಲೆ ಜಯದೇವ ಜಾತ್ರಾ ಮೈದಾನದಲ್ಲಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರ ದೇವಾಲಯದ ಉದ್ಘಾಟನೆ ಹಾಗೂ ಬಸವೇಶ್ವರ ದೇವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಪ್ರತಿಷ್ಠಾಪನಾ ಪ್ರಯುಕ್ತ ಶನಿವಾರಸಂತೆಯ ಗಣಪತಿ ದೇವಸ್ಥಾನದಿಂದ ಗಂಗಾಪೂಜೆ ನೆರವೇರಿಸಿ, ಅಲಂಕೃತ ಮಂಟಪದಲ್ಲಿ ದೇವರ ವಿಗ್ರಹವನ್ನಿರಿಸಿ ಪೂರ್ಣಕುಂಭ ಹೊತ್ತ ಮಹಿಳೆಯರು ನಂದೀಧ್ವಜ, ವೀರಗಾಸೆ ನರ್ತನದೊಂದಿಗೆ ಮಂಗಳ ವಾದ್ಯ ಸಹಿತ ಮೆರವಣಿಗೆ ಸಾಗಿತು.

ತಪೋವನದ ಮನೆಹಳ್ಳಿ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಕೊಡ್ಲಿಪೇಟೆ ಸೋಮಶೇಖರ್ ಶಾಸ್ತ್ರಿ, ಚೌಡೇನಹಳ್ಳಿಯ ಶಿವಲಿಂಗಯ್ಯ ಅವರು ಪೂಜಾ ವಿಧಿಗಳನ್ನು ನೆರವೇರಿಸಿದರು. ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಪದಾಧಿಕಾರಿಗಳು, ಜಾತ್ರಾ ಸಮಿತಿ ಅಧ್ಯಕ್ಷ ಸೋಮಶೇಖರ್, ವಿವಿಧ ಮಠಾಧೀಶರು ಹಾಜರಿದ್ದರು.