ಸಾಗರದ ಮಧ್ಯದಿಂದ ಸಮುದ್ರರಾಜ ಎದ್ದು ಬಂದ ಥಳ-ಥಳನೇ ಹೊಳೆಯುತ್ತಿದ್ದ ದಿವ್ಯ ಆಭರಣಗಳನ್ನೂ, ಕಿರೀಟವನ್ನೂ ಧರಿಸಿದ್ದ ಸಮುದ್ರ ರಾಜನು ಶ್ರೀ ರಾಮನ ಬಳಿಗೆ ಬಂದು ಅವನನ್ನು ಅಪ್ಪಿಕೊಂಡನು. ಆನಂತರ ‘‘ಶ್ರೀರಾಮ ನಿನ್ನ ಕೋಪವನ್ನು ಬಿಡು, ನಾನು ನಿನಗೆ ಸಮುದ್ರವನ್ನು ದಾಟಲು ಸಹಾಯ ಮಾಡುತ್ತೇನೆ. ನೀವು ಸಮುದ್ರವನ್ನು ದಾಟುವಾಗ ಕ್ರೂರ ಪ್ರಾಣಿಗಳಿಂದ ನಿಮಗೆ ಬಾಧೆಯಾಗದಂತೆ ಕಾಪಾಡುತ್ತೇನೆ. ನೀವು ಸೇತುವೆಯನ್ನು ಕಟ್ಟುವಾಗ ಯಾವ ವಸ್ತುಗಳೂ ನೀರಿನಲ್ಲಿ ಮುಳುಗಿ ಹೋಗದಂತೆ ನೋಡಿಕೊಳ್ಳುತ್ತೇನೆ. ನಿನ್ನ ಈ ಸೇನೆಯಲ್ಲಿ ನಳ ಎಂಬ ವಾನರ ನಿದ್ದಾನೆ. ಅವನು ದೇವಶಿಲ್ಪ, ವಿಶ್ವಕರ್ಮನ ಮಗ, ಸೇತುವೆಯನ್ನು ಕಟ್ಟುವದರಲ್ಲಿ ನಿಪುಣ. ಅವನಿಂದಸೇತುವೆಯನ್ನು ಕಟ್ಟಿಸು. ನಿನಗೆ ಒಳ್ಳೆಯದಾಗಲಿ’’ ಎಂದನು. ಶ್ರೀ ರಾಮನಿಗೆ ಸಂತೋಷವಾಯಿತು. ಅವನು ಸಮುದ್ರರಾಜನಿಗೆ ಕೃತಜ್ಞತೆಗಳನ್ನರ್ಪಿಸಿದನು. ನಂತರ ಸುಗ್ರೀವ ಸೇತುವೆ ನಿರ್ಮಾಣ ಕಾರ್ಯವನ್ನು ಈಗಲೇ ಆರಂಭಿಸೋಣ’’ ಎಂದನು.

ಕೂಡಲೇ ಎಲ್ಲ ವಾನರರೂ ಉತ್ಸಾಹದಿಂದ ಕಾರ್ಯ ಪ್ರವೃತ್ತರಾದರು. ಸಮೀಪದಲ್ಲಿದ್ದ ಮಹಾರಣ್ಯವನ್ನು ಹೊಕ್ಕು, ಮರಗಳನ್ನು ಮುರಿದು. ಸಮುದ್ರದ ಬಳಿಗೆ ತಂದರು. ನೀಲ, ಅಶ್ವಕರ್ಣ, ಬಿದಿರು, ತಾಳೆ, ಮಾವು, ಅಶೋಕ, ಬಿಲ್ವ ಮೊದಲಾದ ಮರಗಳನ್ನು ತಂದು ಸಮುದ್ರವನ್ನು ಮುಚ್ಚಿದರು. ಅನೇಕ ಮರಗಳನ್ನು ಬೇರು ಸಹಿತ ಕಿತ್ತು ತಂದರು. ದೊಡ್ಡ ದೊಡ್ಡ ಬಂಡೆಗಳನ್ನು ಹೊತ್ತು ತಂದರು. ಆ ಬಂಡೆಗಳನ್ನು ಸಮುದ್ರಕ್ಕೆ ತಳ್ಳುವಾಗ ಅಲ್ಲೋಲ ಕಲ್ಲೋಲವಾಯಿತು. ನೀರು ಆಕಾಶದವರೆಗೆ ಚಿಮ್ಮುತಲಿತ್ತು. ಹೀಗೆ ವಾನರರು ಸೇತುವೆಯನ್ನು ಕಟ್ಟಲು ಆರಂಭಿಸಿದರು. ನಳನು ಚಟುವಟಿಕೆಯಿಂದ ಓಡಾಡುತ್ತ ಮೇಲ್ವಿಚಾರಣೆ ಮಾಡುತ್ತಿದ್ದನು. ಹತ್ತು ಯೋಜನ ಅಗಲವೂ ನೂರು ಯೋಜನ ಉದ್ದವೂ ಆದ ದೊಡ್ಡ ಸೇತುವೆಯನ್ನು ವಾನರರು ಬಹಳ ಉತ್ಸಾಹದಿಂದ ಐದು ದಿನಗಳಲ್ಲಿ ಕಟ್ಟಿ ಪೂರೈಸಿಬಿಟ್ಟರು. ಸೇತುವೆಯು ಪೂರ್ಣವಾದ ನಂತರ ಅವರ ಉತ್ಸಾಹವಂತೂ ಹೇಳಲೇ ಅಸಾಧ್ಯ. ಎಲ್ಲಾ ವಾನರರೂ ಚಪ್ಪಾಳೆ ಹೊಡೆಯುತ್ತ, ಗಿರ್ರನೆ ತಿರುಗುತ್ತಾ ಹೇಹೇಕಾರ ಹಾಕುತ್ತಾ ಕುಣಿದಾಡಿಬಿಟ್ಟರು.

ಸುಗ್ರೀವನು ‘‘ಶ್ರೀರಾಮ, ಇನ್ನು ನಾವು ನಿಧಾನಿಸಬಾರದು, ಸೇತುವೆಯನ್ನು ಕಟ್ಟಿಯಾಗಿದೆ. ಲಂಕೆಯನ್ನು ಸುಲಭವಾಗಿ ತಲಪಬಹುದು. ನಾವು ಈಗಲೇ ಹೊರಡೋಣ, ನೀನು ಹನುಮಂತನ ಹೆಗಲಮೇಲೂ, ಲಕ್ಷ್ಮಣನು ಅಂಗದನ ಹೆಗಲಮೇಲೂ ಕುಳಿತುಕೊಳ್ಳಿ, ಸಮಸ್ತ ವಾನರಸೇನೆಯೂ ಲಂಕೆಯ ಕಡೆ ಹೊರಡಲಿ, ನಾವು ಲಂಕೆಯನ್ನು ಸೇರಿ ಯುದ್ಧವನ್ನು ಆರಂಭಿಸೋಣ’’ ಎಂದನು.

ಯುದ್ಧ ಸಿದ್ಧತೆ

ವಿಭೀಷಣನ ಮಾರ್ಗದರ್ಶನ ದಲ್ಲಿ ಶ್ರೀರಾಮನ ಸೇನೆ ಲಂಕೆಯ ಕಡೆ ಪ್ರಯಾಣ ಬೆಳೆಸಿತು. ಕೆಲವರು ಸೇತುವೆÉಯ ಅಂಚಿನಲ್ಲೂ, ಹಲವರು ಮಧ್ಯಭಾಗದಲ್ಲೂ ನಡೆಯುತ್ತ ಹೋದರು. ಕೆಲವರು ಆಕಾಶಮಾರ್ಗದಲ್ಲಿ ಹಾರುತ್ತಾ ಲಂಕೆಯ ಕಡೆ ಹೊರಟರು. ಮತ್ತೆ ಕೆಲವು ವಾನರರು ನೀರಿನಲ್ಲಿ ಈಜುತ್ತ ಹೋದರು. ಆ ವಾನರ ಸೇನೆಯ ಕಲಕಲ ಧ್ವನಿಯಿಂದ ಭೂಮ್ಯಾಕಾಶಗಳು ತುಂಬಿ ಹೋದವು. ಭೋರ್ಗರೆÉದು ಅಟ್ಟಹಾಸ ಮಾಡುತ್ತಿದ್ದ ಸಮುದ್ರದ ಫೋಷವು ಅದರ ಮುಂದೆ ಅಡಗಿ ಹೋಯಿತು. ಹಾಗೆ ಪ್ರಯಾಣ ಮಾಡುತ್ತ ಕಪಿಸೇನೆ ಸಮುದ್ರದ ದಕ್ಷಿಣ ತೀರಕ್ಕೆ ಬಂದಿಳಿಯಿತು. ಅನಂತರ ವೀರನಾದ ಶ್ರೀರಾಮನು ಸಮರ ನೀತಿಯನ್ನು ಅನುಸರಿಸಿ ಸೇನೆಯನ್ನು ವ್ಯೂಹÀವಾಹಿ ವಿಭಜಿಸಿದನು. ಅಂಗದ-ನೀಲರು ವಕ್ಷಭಾಗದಲ್ಲೂ, ಋಷಭನು ದಕ್ಷಿಣದಲ್ಲೂ, ಗಂಧವಾದನನು ಎಡಭಾಗದಲ್ಲೂ ತಮ್ಮ ತಮ್ಮ ವಾಹಿನಿಯೊಡನೆ ಸಿದ್ಧರಾದರು. ಜಾಂಬವಂತ, ಸುಷೇಣರು ವ್ಯೂಹದ ಮಧ್ಯಭಾಗದಲ್ಲಿ ನಿಂತರು. ಸೇನಾ ರಕ್ಷಣೆಗೆಂದು ಸುಗ್ರೀವನು ಹಿಂಭಾಗದಲ್ಲಿ ಸಜ್ಜಾದನು. ಸ್ವತಹಃ ಶ್ರೀರಾಮನೇ ಲಕ್ಷ್ಮಣ ನೊಡನೆ ಸೇನೆಯ ಮುಂಭಾಗ ದಲ್ಲಿ ನಿಂತನು. ಹೀಗೆ ಆ ಮಹಾಸೇನೆ ಯುದ್ಧಕ್ಕೆ ಸಜ್ಜಾಗಿ ನಿಂತಿತು. ಆ ಹೊತ್ತಿಗೆ ರಾವಣನು, ಶ್ರೀರಾಮನ ಸೇನೆಯ ಬಲಾಬಲ ಗಳನ್ನು ಪರೀಕ್ಷಿಸಬೇಕೆಂದು ಶುಕ ಮತ್ತು ಸಾರಣರೆಂಬ ಇಬ್ಬರು ಮಂತ್ರಿಗಳನ್ನು ಕಳುಹಿಸಿದನು. ಅವರು ಶ್ರೀರಾಮನನ್ನೂ ಅವನ ಅಗಾಧವಾದ ವಾನರ ಸೇನೆಯನ್ನೂ ಕಂಡು ಭೀತರಾದರು. ಈ ಸೇನೆಯೊಡನೆ ಯುದ್ಧ ಮಾಡಿದರೆ ತಮಗೆ ಖಂಡಿತ ಉಳಿಗಾಲವಿಲ್ಲವೆಂದು ಅವರಿಗೆ ನಿಶ್ಚಯವಾಯಿತು. ಅವರು ರಾವಣನ ಆಸ್ಥಾನಕ್ಕೆ ಬಂದರು. ‘‘ಮಹಾಪ್ರಭು, ಈ ಯುದ್ಧದಲ್ಲಿ ಗೆಲ್ಲುವ ಆಸೆಯನ್ನು ಬಿಟ್ಟುಬಿಡಿ. ಶ್ರೀರಾಮನ ಸೈನ್ಯವು ಸಾಗರದಂತೆ ಅಗಾಧÀವಾಗಿದೆ. ಅಜೇಯರೂ, ಶೂರರೂ ಆದ ಸಹಸ್ರಾವಧಿ ಕಪಿ ನಾಯಕರನ್ನು ಆ ಸೇನೆ ಹೊಂದಿದೆ. ಅವರಿಂದ ನಮಗೆ ಉಳಿಗಾಲವಿಲ್ಲ. ಆ ಕಪಿಗಳು ಆಲದ ಮರಗಳಂತೆ ಬೃಹತ್ ರೂಪವನ್ನು ಹೊಂದಿ ದ್ದಾರೆ. ಅವರ ಸಂಖ್ಯೆ ಎಣಿಕೆಗೆ ಸಿಗಲಾರದÀಷ್ಟು ದೊಡ್ಡದಾಗಿದೆ. ಹಿಂದೆ ನಮ್ಮ ಲಂಕೆಗೆ ಬಂದು ನಮ್ಮನ್ನು ಸಂಕಟಕ್ಕೀಡು ಮಾಡಿದ ಹನುಮಂತನಷ್ಟೆ ಪರಾಕ್ರಮಿಗಳಾದ ಸೇನಾ ನಾಯಕರು ಸಹಸ್ರಾರು ಸಂಖ್ಯೆಯಲ್ಲಿದ್ದಾರೆ. ಸುಗ್ರೀವ, ಅಂಗದ, ಮೈಂದ, ದ್ವಿವಿದ, ದುರ್ಮುಖ, ನೀಲ, ಜಾಂಬವಂತ, ದಧಿಮುಖ, ಸುಮುಖ, ವೇಗದರ್ಶಿ ಮೊದಲಾದ ಸೇನಾ ನಾಯಕರಿ ದ್ದಾರೆ. ಇವರಲ್ಲಿ ಪ್ರತಿಯೊಬ್ಬನೂ ದೇವ-ದಾನವರನ್ನೇ ಗೆಲ್ಲಬಲ್ಲಂತಹವನು, ಇನ್ನು ಶ್ರೀರಾಮನ ಪರಾಕ್ರಮವಂಯೂ ಹೇಳಲೇ ಅಸಾಧ್ಯ. ಆದ್ದರಿಂದ ರಾವಣೇಶ್ವರ ನಾವು ಯುದ್ಧದಲ್ಲಿ ತೊಡಗುವದು ಬೇಡ. ಯುದ್ಧ ದಿಂದ ನಮ್ಮ ವಿನಾಶ ತಪ್ಪದು, ನೀವು ಈಗಲೇ ಸೀತಾದೇವಿ ಯನ್ನು ಶ್ರೀರಾಮನಿಗೆ ಒಪ್ಪಿಸಿ, ಲಂಕೆಯನ್ನು ಉಳಿಸಿ’’ ಎಂದನು.

(ಮುಂದುವರಿಯುವದು)