*ಗೋಣಿಕೊಪ್ಪಲು, ಫೆ. 10: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಬಾಚಿಮಂಡ ಸುವಿನ್ ಗಣಪತಿ, ಉಪಾಧ್ಯಕ್ಷರಾಗಿ ಕಳ್ಳಂಗಡ ಬಾಲಕೃಷ್ಣ ಅವಿರೋಧ ಆಯ್ಕೆಯಾಗಿದ್ದಾರೆ.

ಆರ್.ಎಂ.ಸಿ. ಕಚೇರಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಇಬ್ಬರನ್ನು ಹೊರತುಪಡಿಸಿ ಇತರರು ನಾಮ ಪತ್ರ ಸಲ್ಲಿಸದ ಕಾರಣ ಸುವಿನ್ ಗಣಪತಿ ಹಾಗೂ ಬಾಲಕೃಷ್ಣ ಅವರನ್ನು ಅವಿರೋಧ ಆಯ್ಕೆಗೊಳಿಸಿರುವದಾಗಿ ಚುನಾವಣಾಧಿಕಾರಿ ಮಹದೇವಸ್ವಾಮಿ ಘೋಷಿಸಿದರು.

ಚುನಾವಣೆಯಲ್ಲಿ 11 ಕ್ಷೇತ್ರವನ್ನು ಬಿ.ಜೆ.ಪಿ ತನ್ನದಾಗಿಸಿಕೊಂಡಿತ್ತು. ಹೀಗಾಗಿ ಬಿ.ಜೆ.ಪಿ ಮುಖಂಡರ ತೀರ್ಮಾನದಂತೆ ಅಧ್ಯಕ್ಷ ಸ್ಥಾನಕ್ಕೆ ಸುವಿನ್ ಗಣಪತಿ, ಉಪಾಧ್ಯಕ್ಷ ಸ್ಥಾನಕ್ಕೆ ಬಾಲಕೃಷ್ಣ ಅವರುಗಳು ನಾಮಪತ್ರ ಸಲ್ಲಿಸಿದರು. ಅಧ್ಯಕ್ಷರ ಆಯ್ಕೆಗೆ ಆದೇಂಗಡ ವಿನು ಚಂಗಪ್ಪ, ಅಜ್ಜಿಕುಟ್ಟೀರ ಪ್ರವೀಣ್ ಅನುಮೋದಿಸಿದರು. ಉಪಾಧ್ಯಕ್ಷ ಸ್ಥಾನ ಆಯ್ಕೆಗೆ

(ಮೊದಲ ಪುಟದಿಂದ) ಮಾಚಂಗಡ ಸುಜು, ಚಿಯಕ್‍ಪೂವಂಡ ಜಿ.ಸುಬ್ರಮಣಿ ಅನುಮೋದಿಸಿದರು. ಸದಸ್ಯರುಗಳಾಗಿ ಕೆ.ಯು. ಭೀಮಣಿ, ಜೆ.ಕೆ.ಅಯ್ಯಪ್ಪ, ಹೆಚ್.ಎನ್. ಮೋಹನ್ ರಾಜ್, ನಾಮೇರ ಧರಣಿ, ಚಿಯಕ್‍ಪೂವಂಡ ಜಿ.ಸುಬ್ರಮಣಿ, ಚಂಗಪ್ಪ ಮೇದಪ್ಪ, ಪೂಣಚ್ಚ, ಅಜ್ಜಿಕುಟ್ಟೀರ ಎಂ. ಮುತ್ತಪ್ಪ, ಬೊಳ್ಳಜೀರ ಸುಶೀಲಾ, ನಾಮ ನಿರ್ದೇಶಕರಾಗಿ ಆಯ್ಕೆಗೊಂಡ ಅಜ್ಜಿಕುಟ್ಟೀರ ನರೇನ್ ಕಾರ್ಯಪ್ಪ ಆಯ್ಕೆಯಾಗಿದ್ದರು.

ರೈತರ ಸಮಸ್ಯೆಗಳಿಗೆ ಸ್ಪಂದಿಸುವ ದ್ಯೇಯ ನೂತನ ಸಮಿತಿಯದ್ದಾಗಿದೆ. ಸರಕಾರದ ಅನುದಾನಗಳನ್ನು ರೈತರಿಗೆ ತಲುಪಿಸುವ ಕಾರ್ಯ ಪಾರದರ್ಶಕತೆಯಿಂದ ನಡೆಯಲಿದೆ ಎಂದು ಅಧ್ಯಕ್ಷ ಸುವಿನ್ ಗಣಪತಿ ತಿಳಿಸಿದರು.

ಈ ಸಂದರ್ಭ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಬಿ.ಜೆ.ಪಿ ಪ್ರಮುಖ ಕಾಡ್ಯಮಾಡ ಗಿರೀಶ್ ಗಣಪತಿ, ರಾಜ್ಯ ಬಿ.ಜೆ.ಪಿ ಮಹಿಳಾ ಘಟಕ ಸದಸ್ಯೆ ಕಾಂತಿ ಸತೀಶ್, ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಸುಜಾ ಕುಶಾಲಪ್ಪ, ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ತಾಲೂಕು ಬಿ.ಜೆ.ಪಿ ಘಟಕ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ತಾ.ಪಂ. ಮಾಜಿ ಸದಸ್ಯೆ ತೀತಿರ ಊರ್ಮಿಳಾ, ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಸಮಂತ್, ಎಪಿಎಂಸಿ ಸದಸ್ಯರು ಹಾಜರಿದ್ದರು.