ಮಡಿಕೇರಿ, ಫೆ. 17: ವಿಶ್ವ ಗುರು ಬಸವಣ್ಣನವರ ಮತ್ತು ಶಿವಶರಣರ ದಿವ್ಯ ಸಂದೇಶವನ್ನು ಜನಮನಗಳಿಗೆ ತಲಪಿಸುವ ನಿಟ್ಟಿನಲ್ಲಿ ಮತ್ತು ಪರಿಚಯಕ್ಕಾಗಿ ಬೆಂಗಳೂರಿನ ಕೇಂದ್ರ ಬಸವ ಸಮಿತಿಯು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಮತ್ತು ಕವನ ಸ್ಪರ್ಧೆಯನ್ನು ಏರ್ಪಡಿಸಿದೆ.

‘ಬಸವಣ್ಣನವರ ಪರಿವರ್ತನಾತ್ಮಕ ಮನೋಧರ್ಮ: ಅಂದು-ಇಂದು- ಮುಂದು’ ಪ್ರಬಂಧದ ವಿಷಯ ಮತ್ತು ಬಸವಾದಿ ಶರಣರ ದಿವ್ಯ ಸಂದೇಶ ಸಾರುವ ಕವಿತೆಗಳು ಕವನದ ವಿಷಯ ಕುರಿತು ಉದಯೋನ್ಮುಖ ಹಾಗೂ ಪ್ರತಿಭಾವಂತ ಬರಹಗಾರರಿಂದ, ಕವಿಗಳಿಂದ ಪ್ರಬಂಧ ಮತ್ತು ಕವನಗಳನ್ನು ಆಹ್ವಾನಿಸಲಾಗಿದೆ.

ಪ್ರಬಂಧ 6 ಪುಟಗಳಿಗೆ ಮೀರದಂತೆ, ಕವನ 2 ಪುಟಗಳಿಗೆ ಮೀರದಂತೆ ಕಾಗದದ ಒಂದೇ ಮಗ್ಗುಲಲ್ಲಿ ಬರೆದು ಅಥವಾ ಡಿ.ಟಿ.ಪಿ. ಮಾಡಿಸಿ ಸ್ವ ವಿಳಾಸ, ಕಿರು ಪರಿಚಯ, ಭಾವಚಿತ್ರ ಹಾಗೂ ವ್ಯಾಟ್ಸಪ್ ನಂ., ಮೊಬೈಲ್ ಸಂಖ್ಯೆಯೊಂದಿಗೆ ತಾ. 28 ರೊಳಗೆ ಅರವಿಂದ ಬಸಪ್ಪ ಜತ್ತಿ, ಅಧ್ಯಕ್ಷರು, ಬಸವ ಸಮಿತಿ, ಬಸವ ಭವನ, ಶ್ರೀ ಬಸವೇಶ್ವರ ರಸ್ತೆ, ಬೆಂಗಳೂರು- 560001 ಈ ವಿಳಾಸಕ್ಕೆ ಕಳುಹಿಸಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸಲು ವಯಸ್ಸಿನ ನಿರ್ಬಂಧವಿರುವದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 9448920888 ಸಂಪರ್ಕಿಸಬೇಕೆಂದು ಕೇಂದ್ರ ಬಸವ ಸಮಿತಿ ನಿರ್ದೇಶಕ ಮೋಹನ ಬಸವನಗೌಡ ಪಾಟೀಲ ತಿಳಿಸಿದ್ದಾರೆ.

ಪ್ರಬಂಧ-ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಏಪ್ರಿಲ್ 29 ರ ಬಸವ ಜಯಂತ್ಯೋತ್ಸವದಂದು ಬೆಂಗಳೂರು ಬಸವ ಭವನದಲ್ಲಿ ಬಹುಮಾನ, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಂಸನಾ ಪತ್ರ ನೀಡಲಾಗುವದು.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. 10000, ದ್ವಿತೀಯ ಬಹುಮಾನ ರೂ. 6000 ಮತ್ತು ತೃತೀಯ ಬಹುಮಾನ ರೂ. 3000 ಹಾಗೂ ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. 5000, ದ್ವಿತೀಯ ಬಹುಮಾನ ರೂ. 3000 ಮತ್ತು ತೃತೀಯ ಬಹುಮಾನ ರೂ. 2000 ನೀಡಲಾಗುವದೆಂದು ಬಸವ ಸಮಿತಿ ನಿರ್ದೇಶಕರು ತಿಳಿಸಿದ್ದಾರೆ.