ಶನಿವಾರಸಂತೆ, ಫೆ. 19: ಪಟ್ಟಣದ ಬಿದರೂರು ರಸ್ತೆಯಲ್ಲಿ ನಿರ್ಮಾಣ ಗೊಂಡಿರುವ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ತಾ.22 ರಂದು ನಡೆಯಲಿದೆ.

ಅಂದು ಮಧ್ಯಾಹ್ನ 2 ಗಂಟೆಗೆ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ರಾಜ್ಯ ಕಾರ್ಯದರ್ಶಿ ಡಿ.ಶಶಿಕುಮಾರ್ ಶಾಲಾ ಕಟ್ಟಡವನ್ನು ಉದ್ಘಾಟಿಸುತ್ತಾರೆ.

2-30ರಿಂದ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಹಿಸಲಿದ್ದಾರೆ. ಶಕ್ತಿ ದಿನಪತ್ರಿಕೆ ಸಂಪಾದಕ ಬಿ.ಜಿ.ಅನಂತಶಯನ ಸಮಾರಂಭ ಉದ್ಘಾಟಿಸಲಿದ್ದಾರೆ. ಅಭಿಯಂತರ ಮುಕುಂದ್, ಗುತ್ತಿಗೆದಾರ ಎಚ್.ಪಿ.ಜಯಚಂದ್ರ, ಬಿಹಾರದ ಅಜಯ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವದು.

ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಬಸವರಾಜ್, ಮೈಸೂರ್ ಎಲೆಕ್ಟ್ರಾನಿಕ್ಸ್ ನ ಎಚ್.ಪಿ.ದೇವೇಂದ್ರಕುಮಾರ್, ಕ್ಷೇತ್ರಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ಶಿಕ್ಷಣ ಸಂಯೋಜಕ ರಾಮಚಂದ್ರ ಮೂರ್ತಿ, ನಿವೃತ್ತ ಉಪ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಜಿ.ಕೃಷ್ಣರಾಜು, ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯ ಅನಂತ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಗಿರೀಶ್, ಮಹಮ್ಮದ್ ಗೌಸ್, ಸಮಾಜ ಸೇವಕ ಸಂಕೇತ್ ಪೂವಯ್ಯ ಪಾಲ್ಗೊಳ್ಳುತ್ತಾರೆ ಎಂದು ಗುರುಕುಲ ವಿದ್ಯಾಸಂಸ್ಥೆ ಅಧ್ಯಕ್ಷೆ ಡಿ.ಸುಜಲಾದೇವಿ ತಿಳಿಸಿದ್ದಾರೆ.

ಸುಪ್ರಜ ಉತ್ಸವ್: ಸುಪ್ರಜ ಗುರುಕುಲ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಸುಪ್ರಜ ಉತ್ಸವ್ ಫೆ.23ರಂದು ಮಧ್ಯಾಹ್ನ 3-30ರಿಂದ ಶಾಲಾ ಗುರುಕುಲ ಅಧ್ಯಕ್ಷೆ ಸುಜಲಾದೇವಿ ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ.ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರಿನ ನಿವೃತ್ತ ಕ್ಯಾಪ್ಟನ್ ಎಸ್.ಸಿ.ಮಂಜುನಾಥ್, ಗುರುಕುಲ ಕಾರ್ಯದರ್ಶಿ ಎನ್.ಟಿ.ಗುರುಪ್ರಸಾದ್ ಪಾಲ್ಗೊಳ್ಳುತ್ತಾರೆ.ಬಳಿಕ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ.ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಬಹುಮಾನ ವಿತರಿಸ ಲಾಗುವದು ಎಂದು ತಿಳಿಸಿದ್ದಾರೆ.