ಸುಂಟಿಕೊಪ್ಪ, ಫೆ.18: ಇಲ್ಲಿನ ಕೊಡವ ಕೂಟ ಮತ್ತು ಲೋಪಾಮುದ್ರೆ ಸ್ವಸಹಾಯ ಸಂಘದ ವತಿಯಿಂದ ಕೊಡಗು ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಗಣನೀಯ ಸಾಧನೆ ಮಾಡುವ ಮೂಲಕ 2017ನೇ ಗಣರಾಜ್ಯೋತ್ಸವದ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಸೀತರಾಂ ಅವರಿಂದ ರಾಜ್ಯ ಸರಕಾರದ ವತಿ ಯಿಂದ ನೀಡಲಾದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದಿರುವ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಅಜ್ಜಿಕುಟ್ಟಿರ ಗಿರೀಶ್ ಅವರಿಗೆ ಇಲ್ಲಿನ ಕೊಡವ ಸಮಾಜದಲ್ಲಿ ಸನ್ಮಾನಿಸಿ ಗೌರವಿಸ ಲಾಯಿತು. ಈ ಸಂದರ್ಭ ಮಾತನಾಡಿದ ಬೊಳ್ಳಂದಂಡ ಸರೋಜಿನಿ ದೇವಯ್ಯ, ಸನ್ಮಾನಿತರು ಕೃಷಿಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರಲ್ಲದೆ ತಮ್ಮ ಅನುಭವವನ್ನು ಸಾಮಾನ್ಯ ರೈತರಿಗೆ ಮಾಹಿತಿ ನೀಡಿ ಜನರ ಮೆಚ್ಚುಗೆ ಪಡೆದಿದ್ದಾರೆ. ಇವರ ಈ ಸೇವೆ ನಿರಂತರವಾಗಿರಲಿ ಎಂದು ಆಶಿಸಿದರು .ಮುಕ್ಕಾಟಿರ ಭವಾನಿ ಉತ್ತಪ್ಪ, ಅಪ್ಪಚೆಟ್ಟೊಳಂಡ ಶಾಂತಿ ಕಾವೇರಪ್ಪ ಮಾತನಾಡಿದರು. ಅಧ್ಯಕ್ಷತೆಯನ್ನು ಕೊಡವ ಕೂಟದ ಅಧ್ಯಕ್ಷ ಸಿ.ಎ. ಉತ್ತಯ್ಯ ವಹಿಸಿದ್ದರು.

ವೇದಿಕೆಯಲ್ಲಿ ಕೊಡವ ಕೂಟ ಉಪಾಧ್ಯಕ್ಷ ಮಾಳೆಯಂಡ ಕೆ.ಪೊನ್ನಣ್ಣ, ಮುಕ್ಕಾಟಿರ ಎ. ವಸಂತ, ಚೆಟ್ರಂಡ ಲೀಲಾ ಮೇದಪ್ಪ ಉಪಸ್ಥಿತರಿದ್ದರು.