ಮಡಿಕೇರಿ, ಫೆ. 21: ಕೊಡಗು ಜಿಲ್ಲೆಯ ವಿವಿಧ ರಸ್ತೆ ಹಾಗೂ ಸೇತುವೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ರೂ. 38.35 ಕೋಟಿ ಅನುದಾನ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್, ಲೋಕೋಪಯೋಗಿ ಸಚಿವ ಮಹದೇವ ಪ್ರಸಾದ್ ಹಾಗೂ ಅವರ ಆಪ್ತ ಕಾರ್ಯದರ್ಶಿ ಕೊಡಗಿನವರಾದ ರಾಜೇಂದ್ರ ಅವರ ಪ್ರಯತ್ನದಿಂದ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಟೆಂಡರ್ ಪ್ರಕಿಯೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ತಿಳಿಸಿದ್ದಾರೆ.

ಮಡಿಕೇರಿ ತಾಲೂಕಿಗೆ ರೂ. 10.05 ಕೋಟಿ, ಸೋಮವಾರಪೇಟೆ ತಾಲೂಕಿಗೆ ರೂ. 15.35 ಕೋಟಿ ಹಾಗೂ ವೀರಾಜಪೇಟೆ ತಾಲೂಕಿಗೆ ರೂ. 12.95 ಕೋಟಿ ಅನುದಾನವನ್ನು ರಾಜ್ಯ ಸರಕಾರ ಮಂಜೂರಾತಿ ಮಾಡಿದ್ದು, ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭಿಸಿ ಕಾಮಗಾರಿಗೆ ಚಾಲನೆ ನೀಡುವಂತೆ ಸಚಿವ ಸೀತಾರಾಮ್ ಅವರು ಸೂಚಿಸಿದ್ದಾರೆ ಎಂದು ಹರೀಶ್ ಬೋಪಣ್ಣ ತಿಳಿಸಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಸುಂಟಿಕೊಪ್ಪದಿಂದ ಚೆಟ್ಟಳ್ಳಿ 13.35 ಕಿ.ಮೀ.ವರೆಗೆ (ಹಿರಿಸೇವೆ ಚೆಟ್ಟಳ್ಳಿ) ರಸ್ತೆ ಅಗಲೀಕರಣಕ್ಕಾಗಿ ರೂ. 3.50 ಕೋಟಿ, ಐಗೂರು-ಕಿರಗಂದೂರು-ಕೂಡಗದ್ದೆ-ತಾಕೇರಿ ರಸ್ತೆಯ 95 ಮೀ.ವರೆಗೆ ಹಾಳಾದ ಭಾಗಗಳ ನವೀಕರಣಕ್ಕಾಗಿ ರೂ. 30 ಲಕ್ಷ, ಮಾದಾಪುರ-ಸೂರ್ಲಬ್ಬಿ-ಶಾಂತಳ್ಳಿ ರಸ್ತೆಗಳ 1.60 ಕಿ.ಮೀ. ಹಾಳಾದ ಭಾಗಗಳ ನವೀಕರಣಕ್ಕಾಗಿ 50 ಲಕ್ಷ, ಸೋಮವಾರಪೇಟೆಯ ಮಸಗೋಡು-ಯಲಕನೂರು-ಕಣಿವೆ ರಸ್ತೆಯ 3.69 ಕಿ.ಮೀ.ಗೆ ರೂ. 1 ಕೋಟಿ, ಹೆಬ್ಬಾಲೆ-ಹಳೆಕೋಟೆ-ಚಿಕ್ಕಕಮ್ಮರಹಳ್ಳಿ ರಸ್ತೆಯ 2.10 ಕಿ.ಮೀ. ಹಾಳಾದ ಭಾಗಗಳ ನವೀಕರಣಕ್ಕಾಗಿ ರೂ. 70 ಲಕ್ಷ, ಗೋಪಾಲಪುರ-ಬಾಣವಾರ-ಹೆಬ್ಬಾಲೆ ರಸ್ತೆ 3 ಕಿ.ಮೀ. ಮರು ಡಾಂಬರೀಕರಣಕ್ಕೆ ರೂ. 1 ಕೋಟಿ ಮಂಜೂರಾಗಿದೆ.

ಹುಣಸೂರು-ತಲಕಾವೇರಿ (ರಾಜ್ಯ ಹೆದ್ದಾರಿ 90) ರಸ್ತೆ 105.75 ಕಿ.ಮೀ.ರಲ್ಲಿ ಸೇತುವೆ (ಕೋರಂಗಾಲ ಹತ್ತಿರ) ಮರು ನಿರ್ಮಾಣ ಕಾಮಗಾರಿಗೆ ರೂ. 75 ಲಕ್ಷ ಮಂಜೂರಾಗಿದೆ.ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ-ಭಾಗಮಂಡಲ ರಸ್ತೆ 5 ರಿಂದ 10.50, 12.50 ರಿಂದ 14, 18.50 ರಿಂದ 19, 21 ರಿಂದ 22 ಕಿ.ಮೀ.ವರೆಗೆ ಮರು ಡಾಂಬರೀಕರಣಕ್ಕೆ ರೂ. 2 ಕೋಟಿ, ಪೊನ್ನಂಪೇಟೆ-ಕಾನೂರು-ನಿಟ್ಟೂರು ರಸ್ತೆಯ ಸರಪಳಿ 2 ಕಿ.ಮೀ.ವರೆಗೆ ಮರು ಡಾಂಬರೀಕರಣಕ್ಕೆ ರೂ. 1 ಕೋಟಿ ಮಂಜೂರಾಗಿದೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದ ದುಂಡಳ್ಳಿ-ದೊಡ್ಡಬಿಳಹ-ಎಸಳೂರು ಪೇಟೆ-ಕ್ಯಾತೆ ರಸ್ತೆಯ 1 ಕಿ.ಮೀ.ವರೆಗೆ ಡಾಂಬರೀಕರಣಕ್ಕೆ ರೂ. 80 ಲಕ್ಷ, ಮಡಿಕೇರಿ ಸಮೀಪದ ಮಕ್ಕಂದೂರು-ಹಾಲೇರಿ-ಟಿ.ಸಿ. ಕಾಲೋನಿ ರಸ್ತೆಯ 1.91 ಕಿ.ಮೀ.ವರೆಗೆ ಅಭಿವೃದ್ಧಿ ಕಾಮಗಾರಿಗೆ ರೂ. 2 ಕೋಟಿ, ವೀರಾಜಪೇಟೆ-ಒಂಟಿಅಂಗಡಿ ರಸ್ತೆಯ 4.20 ಕಿ.ಮೀ. ಅಭಿವೃದ್ಧಿಪಡಿಸುವ ಕಾಮಗಾರಿಗೆ ರೂ. 2.50 ಕೋಟಿ, ವೀರಾಜಪೇಟೆ-ಬೋಯಿಕೇರಿ ಭಗವತಿ ದೇವಸ್ಥಾನ ರಸ್ತೆಯ 2.20 ಕಿ.ಮೀ.ವರೆಗೆ ಅಭಿವೃದ್ಧಿಪಡಿಸಲು ರೂ. 1.50 ಕೋಟಿ, ಬಿಟ್ಟಂಗಾಲ-ಕೂಟಿಯಾಲ ರಸ್ತೆಯ ಏಕಪಥ ರಸ್ತೆಯನ್ನು ಮಧ್ಯಮ ಪಥ ರಸ್ತೆಯನ್ನಾಗಿ ಅಗಲೀಕರಣಗೊಳಿಸುವ ಅಭಿವೃದ್ಧಿಗೆ ರೂ. 1.65 ಕೋಟಿ ಪೊನ್ನಂಪೇಟೆ-ಪೊನ್ನಪ್ಪಸಂತೆ 30 ಕಿ.ಮೀ.ವರೆಗೆ ಸೇತುವೆ ಕೂಡುವ ರಸ್ತೆ ನಿರ್ಮಾಣಕ್ಕೆ ರೂ. 30 ಲಕ್ಷ, ಬಾವಲಿ-ಎಡಪಾಲ-ಕಡಂಗ ರಸ್ತೆ 7 ಕಿ.ಮೀ.ವರೆಗೆ ಅಭಿವೃದ್ಧಿಪಡಿಸಲು ರೂ. 3.30 ಕೋಟಿ, ಟಿ. ಶೆಟ್ಟಿಗೇರಿ-ಬಿರುನಾಣಿ ರಸ್ತೆಯ 8 ಕಿ.ಮೀ.ವರೆಗೆ ಅಗಲೀಕರಣ ಅಭಿವೃದ್ಧಿಗೆ ರೂ. 5 ಕೋಟಿ, ನಿಟ್ಟೂರು ಗ್ರಾಮ ಪಂಚಾಯಿತಿ ವಡ್ಡರಮಾಡು ಜಂಕ್ಷನ್‍ನಿಂದ ಕೊಟ್ಟಗೇರಿ ಗ್ರಾಮಕ್ಕೆ ಹೋಗುವ ರಸ್ತೆಯ ಡಾಂಬರೀಕರಣಕ್ಕಾಗಿ ರೂ. 1 ಕೋಟಿ ಮಂಜೂರಾಗಿದೆ ಎಂದು ಹರೀಶ್ ಬೋಪಣ್ಣ ತಿಳಿಸಿದ್ದಾರೆ.