*ಸಿದ್ದಾಪುರ, ಫೆ. 22: ಕೇಂದ್ರ, ರಾಜ್ಯ ಸರ್ಕಾರ ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಇಲ್ಲಿನ ಗ್ರಾಮ ಪಂಚಾಯಿತಿ ಮುಂಭಾಗ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಕೇಚಮಾಡ ಸರಿತಾ ಪೂಣಚ್ಚ ಹಾಗೂ ತಾಲೂಕು ಪಂಚಾಯಿತಿ ಸದಸ್ಯ ಕೆ.ಎಂ. ಜನೀಶ್ ಉದ್ಘಾಟಿಸಿದರು.

ಬಳಿಕ ಸಿದ್ದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಮಂಜೂರಾಗಿರುವ ಬಯಲು ರಂಗ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ನಂತರ ಇತ್ತೀಚೆಗೆ ಮೃತರಾದ ಗ್ರಾಮ ಪಂಚಾಯಿತಿ ಸದಸ್ಯ ಟಿ.ಹೆಚ್. ಮಂಜುನಾಥ್ ತಂದೆ ಹನುಮಯ್ಯ ನವರ ಮನೆಗೆ ಬೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ. ಮಣಿ, ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ಟಿ.ಹೆಚ್. ಮಂಜುನಾಥ್, ಸದಸ್ಯರಾದ ಶಾರದ, ಪೂವಮ್ಮ, ಪ್ರೇಮ, ಸುಶೀಲ, ಶಾರದ, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಹೆಚ್. ಮೂಸಾ ಬ್ಯಾರಿ, ಪ್ರಮುಖರಾದ ಎಸ್.ಬಿ. ಪ್ರತೀಶ್, ಎಂ. ಬಿಜಾಯ್, ಭಾರತೀಯ ಜನತಾ ಪಕ್ಷದ ಮುಖಂಡ ಕೆ.ಎ. ಹರಿದಾಸ್ ಉಪಸ್ಥಿತರಿದ್ದರು.