ಮಡಿಕೇರಿ, ಫೆ. 22: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಕೊಡಗು ಜಿಲ್ಲಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ನಡೆಯಿತು.

ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸೋಮವಾರಪೇಟೆ ಸಂತ ಜೋಸೆಫರ ಪ್ರೌಢಶಾಲೆಯ ಪಿ. ಅನಿರುದ್ಧ್ ರಾಮ್ ಮತ್ತು ಎಂ.ವಿ. ಚಂದನ್ ಇವರಿಬ್ಬರು ಮಾರ್ಚ್ 4 ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ವಿಜ್ಞಾನ ರಸಪ್ರಶ್ನೆಗೆ ಆಯ್ಕೆಗೊಂಡಿದ್ದಾರೆ.

ಮಡಿಕೇರಿ ಸಂತ ಮೈಕಲರ ಪ್ರೌಢಶಾಲೆಯ ಅಪೇಕ್ಷಾ ಆರ್. ರೈ ಮತ್ತು ಹೆಚ್.ಜಿ. ಅಪೂರ್ವ ದ್ವಿತೀಯ ಸ್ಥಾನ ಪಡೆದರು. ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ. 3 ಸಾವಿರ ನಗದು ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. 2 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಮಡಿಕೇರಿಯ ಸಂತ ಜೋಸೆಫರ ಬಾಲಕಿಯರ ಪ್ರೌಢಶಾಲೆಯ ಶೈನಾ ಫರ್ಹೀನ್ ಹಾಗೂ ಬಿ.ಡಿ. ನೇಹಾ ತೃತೀಯ ಸ್ಥಾನ ಪಡೆದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದ ಡಿ.ಡಿ.ಪಿ.ಐ. ಕಚೇರಿಯ ಪ್ರಭಾರ ಶಿಕ್ಷಣಾಧಿಕಾರಿ ದೇವನಾಯಕ್, ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿದರು.

ಕ್ವಿಜ್ ಮಾಸ್ಟರ್ ಆಗಿ ಎಮ್ಮೆಮಾಡು ಸರ್ಕಾರಿ ಪ್ರೌಢಶಾಲೆಯ ಪ್ರಬಾರ ಮುಖ್ಯ ಶಿಕ್ಷಕ ಪಿ.ಆರ್. ಅಯ್ಯಪ್ಪ ಹಾಗೂ ಕ್ವಿಜ್ ಸಹಾಯಕರಾಗಿ ಕಡಗದಾಳು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಹೆಚ್.ಎನ್. ಭಾರತಿ ಕಾರ್ಯನಿರ್ವಹಿಸಿದರು. ವಿಷಯ ಪರಿವೀಕ್ಷಕಿ ಕ್ಯಾತ್ಯಾಯಿನಿ, ಶಿಕ್ಷಣ ಸಂಯೋಜಕ ಚಂದ್ರಹಾಸ್, ಮಾರ್ಗದರ್ಶಿ ಶಿಕ್ಷಕ ಹ್ಯೂಬರ್ಟ್ ಡಯಾಸ್ ಇದ್ದರು.