ವಿಶೇಷ ವರದಿ: ಕೂಡಂಡ ರವಿ

ಮಡಿಕೇರಿ, ಫೆ. 25: ಭಾರತದ ಕೃಷಿಕನ ಜೊತೆ ಮಳೆರಾಯ ಜೂಜಾಡುತ್ತಿದ್ದಾನೆ ಎಂಬ ಮಾತು ಜಿಲ್ಲೆಯ ಕಾಫಿ ಬೆಳೆಗಾರರ ಪಾಲಿಗೆ ಅಕ್ಷರಶಃ ನಿಜವಾಗಿದೆ. ವಾಡಿಕೆಯ ಮಳೆ ಈ ಬಾರಿ ಸಾಕಷ್ಟು ಮುಂಚಿತವಾಗಿ ಸುರಿದಿದೆ. ಒಂದೆಡೆ ಬಂದ ಫಸಲನ್ನು ಕೊಯ್ಲು ಮಾಡುವದೋ ಎಂಬ ಗೊಂದಲದಲ್ಲಿಯೇ ಮುಂದಿನ ಫಸಲಿನ ನಿರೀಕ್ಷೆಗಾಗಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುವದೋ ಎಂಬ ತ್ರಿಶಂಕು ಸ್ಥಿತಿಯಲ್ಲಿ ಬೆಳೆಗಾರನಿದ್ದಾನೆ. ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯ ಪರಿಣಾಮ ಬೆಳೆಗಾರರು ಅಡಕತ್ತರಿಗೆ ಸಿಲುಕಿದ್ದಾರೆ. ಒಂದು ಕಡೆ ಕಾಫಿ ಕೊಯ್ಲಿನ ಪರದಾಟ ಮತ್ತೊಂದೆಡೆ ಆಕಾಶದ ಕಡೆ ನಿರಂತರ ವೀಕ್ಷಣೆಯ ಮಧ್ಯೆ ಕೊಡಗಿನ ಬೆಳೆಗಾರರಿದ್ದಾರೆ.

ಇನ್ನೂ ಬಾರದ ಹಿಮ್ಮಳೆ

ವಾಡಿಕೆಯ ಮಳೆಯೂ ಮುಂದಾಗಿ ಆಗಮಿಸಿರುವದರಿಂದ ಸಕಾಲಿಕವಾಗಿ ಹಿಮ್ಮಳೆ ಸಿಗುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಅದರಂತೆ ಈವರೆಗೂ ಮತ್ತೆ ಮಳೆಯಾಗಿಲ್ಲ. ಅರೆಬರೆ ಮಳೆಯಾದ ಕಡೆ ಬೆಳೆಗಾರರು ತುಂತುರು ನೀರಾವರಿ ಮಾಡುತ್ತಿರುವದು ಜಿಲ್ಲೆಯ ಕೆಲವೆಡೆಗಳಲ್ಲಿ ಗೋಚರವಾಗಿದೆ. ಹೂಮಳೆ ಬಿದ್ದು ಸುಮಾರು ಒಂದು ತಿಂಗಳು ಸಮೀಪಿಸು ತ್ತಿದ್ದರೂ, ಹಿಮ್ಮಳೆಯೇ ಇನ್ನೂ ಗೋಚರವಾಗದಿರುವದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಮಳೆಯ ಪರಿಣಾಮ ಹೂ ಮುಂದುವರೆದಿ ರುವದರಿಂದ ಕಾಫಿ ಕೊಯ್ಲಿಗೆ ತೀವ್ರ ಹಿನ್ನೆಡೆಯಾಗಿತ್ತು. ನೀರಾವರಿಗೆ ಸಕಲ ರೀತಿಯಲ್ಲಿ ಸಿದ್ಧರಾದ ಬೆಳೆಗಾರರು ಈಗಾಗಲೇ ಹಲವೆಡೆಗಳಲ್ಲಿ ತುಂತುರು ನೀರಾವರಿ ಹನಿಸಲು ಆರಂಭಿಸಿ ದ್ದಾರೆ. ಕಾಫಿ ಕೊಯ್ಲು ಮುಗಿಯದ ಕಾರಣ ಹಲವಾರು ಬೆಳೆಗಾರರು ನೀರಾವರಿ ಮಾಡುತ್ತಿರುವ ಕೃಷಿಕರನ್ನು ಕಂಡು ಕೈಹಿಸುಕಿ ಕೊಳ್ಳಲಾರಂಭಿಸಿದ್ದಾರೆ.

ಧರಾಶಾಹಿಯಾಗುತ್ತಿರುವ ಕಾಫಿ

ಹೆಚ್ಚು ಬಿಸಿಲು ಬೀಳುವ ಕಡೆಗಳಲ್ಲಿ ಕಾಫಿ ಹಣ್ಣು ಮಾಗಿ ಕಪ್ಪು ಬಣ್ಣಕ್ಕೆ ತಿರುಗಿತ್ತು. ಆ ಸಮಯಕ್ಕೆ ಸರಿಯಾಗಿ ಮಳೆ ಬಂತು. ಪರಿಣಾಮ ಕಪ್ಪು ಬಣ್ಣಕ್ಕೆ ತಿರುಗಿದ ಕಾಫಿ ಮಳೆ ಬಂದು ಒಂದೆರಡು ದಿನಗಳ ತರುವಾಯ ಉದುರಲಾರಂಭವಾಯಿತು. ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯ ಪರಿಣಾಮ ಕಪ್ಪು ಬಣ್ಣಕ್ಕೆ ತಿರುಗಿದ ಕಾಫಿ ಸಂಪೂರ್ಣ ಧರಾಶಾಹಿಯಾಗುತ್ತಿದೆ. ಇನ್ನೂ ಹೆಚ್ಚಾಗಿ ಹಣ್ಣಾಗಿರುವ ಕಾಫಿ ಅಕಾಲಿಕ ಮಳೆಯ ಪರಿಣಾಮ ಒಣಗಿ ನೆಲಕ್ಕೆ ಉರುಳುತ್ತಿರುವದು ಗೋಚರವಾಗಿದೆ. ಪರಿಣಾಮ ಕಾಫಿ ಗಿಡದಲ್ಲಿರುವದಕ್ಕಿಂತ ಹೆಚ್ಚು ಕಾಫಿ ನೆಲದಲ್ಲಿಯೂ ಗೋಚರವಾಗುತ್ತಿದೆ.

ಶೇ. 10-20 ಹೂ ಬಾಕಿ

ಅಕಾಲಿಕ ಮಳೆಯ ಪರಿಣಾಮ ಕಾಫಿ ತೋಟದಲ್ಲಿನ ಶೇ. 50 ಭಾಗ ಹೂ ಅರಳಿದ್ದು, ಅಷ್ಟೇ ಪ್ರಮಾಣದ ಹೂ ಅರಳಲು ಬಾಕಿ ಇದೆ. ಅರಳಿದ ಹೂವಿಗೆ ಕಾಯಿ ಕಟ್ಟಲು ಸಕಾಲಿಕ ಮಳೆ ಬೇಕಾಗಿದೆ. ನೆಲಕ್ಕುರುಳಿದ ಕಾಫಿಯನ್ನು ಆರಿಸುವದು ಬೆಳೆಗಾರರಿಗೆ ತ್ರಾಸದಾಯಕ ವೆನಿಸಲಿದೆ. ಒಂದೆಡೆ ನೆಲಕ್ಕು ರುಳಿರುವ ಕಾಫಿ ಆರಿಸುವದೋ, ಮತ್ತೊಂದೆಡೆ ಮುಂದಿನ ವರ್ಷದ ಕಾಫಿ ಫಸಲಿಗಾಗಿ ತುಂತುರು ನೀರು ಹಾಯಿಸುವದೋ ಎಂದು ಕೆಲವರು ಗೊಂದಲದಲ್ಲಿದ್ದಾರೆ. ಮತ್ತೆ ಕೆಲವರು ನೀರು, ಯಂತ್ರೋಪಕರಣ, ಆಳು-ಕಾಳು ಇದ್ದವರು ನೀರಾವರಿ ಮಾಡುವಲ್ಲಿ ತಲ್ಲೀನರಾಗಿರುವರು.