ವೀರಾಜಪೇಟೆ, ಫೆ. 25: ಅಂಬಟ್ಟಿ ಬಳಿ ಇಂದು ಅಪರಾಹ್ನ 12.30 ಗಂಟೆಗೆ ನಡೆದ ಕಾರು-ಬೈಕ್ ಡಿಕ್ಕಿಯಲ್ಲಿ ಬೈಕ್ ಸವಾರ ಎಂ.ಆರ್. ಆಕಾಶ್ (16) ಗಂಭೀರ ಗಾಯಗೊಂಡು ಮಡಿಕೇರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇನ್ನೂ ನೋಂದಣಿಯಾಗದ ಸ್ಲ್ಪೆಂಡರ್ ಐ10 ಸ್ಮಾರ್ಟ್ ಮೋಟಾರ್ ಸೈಕಲ್‍ನಲ್ಲಿ ಇಲ್ಲಿನ ಕಾವೇರಿ ಕಾಲೇಜಿನ ವಿದ್ಯಾರ್ಥಿಯೂ ಆಗಿರುವ ಆಕಾಶ್ ಪೊನ್ನಂಪೇಟೆ ಬಳಿಯ ಕಿರುಗೂರು ಗ್ರಾಮದಲ್ಲಿ ಶಿವರಾತ್ರಿ ಉತ್ಸವದಲ್ಲಿ ಭಾಗಿಯಾಗಲು ತೆರಳುತ್ತಿದ್ದಾಗ, ಗೋಣಿಕೊಪ್ಪಲು ಕಡೆಯಿಂದ ಬಂದ (ಕೆ.ಎಲ್. 10ಎಲ್.ಎಚ್ 234)ರ ಫೋರ್ಡ್ ಕಾರು ಡಿಕ್ಕಿಯಾಗಿದೆ. ಪರಿಣಾಮ ಆಕಾಶ್ ರಸ್ತೆಗೆ ಬಿದ್ದು ತಲೆಗೆ ಗಾಯ ಉಂಟಾಗಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಈತನಿಗೆ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮಡಿಕೇರಿ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಕೊನೆಯುಸಿರೆಳೆದಿದ್ದಾನೆ.

ವೀರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾರನ್ನು ಕೇರಳದ ಅಜಯ್ ಎಂಬವರು ಚಾಲಿಸುತ್ತಿದ್ದರೆಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಪ್ರಕರಣದ ತನಿಖಾಧಿಕಾರಿ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು.

ಕಾರು-ಬೈಕ್ ಡಿಕ್ಕಿಯಾದ ನಂತರ ಸವಾರ ಆಕಾಶ್ ರಸ್ತೆಗೆ ಬಿದ್ದ ತಕ್ಷಣ ಆತನ ಹೊಟ್ಟೆಯ ಮೇಲೆ ಕಾರಿನ ಬಲದಭಾಗದ ಮುಂದಿನ ಟಯರ್ ಹರಿದಿದೆ. ಇದರಿಂದ ಆಕಾಶ್‍ನ ಎರಡೂ ಕಾಲುಗಳಿಗೂ, ಹೊಟ್ಟೆಯ ಮಧ್ಯ ಭಾಗಕ್ಕೂ ಗಂಭೀರ ಗಾಯವಾಗಿತ್ತು. ಕಾರು ಹಾಗೂ ಬೈಕ್‍ಗೆ ಯಾವದೇ ಜಖಂ ಉಂಟಾಗಿಲ್ಲವೆನ್ನಲಾಗಿದೆ. ಆಕಾಶ್ ಮಡಿಕೇರಿ ಟಿ.ವಿ.1 ಮಾಧ್ಯಮದ ವರದಿಗಾರ ಎಂ.ಕೆ. ರವಿಕುಮಾರ್-ಪುಷ್ಪಲತಾ ದಂಪತಿಯ ಪುತ್ರ.