ಮಡಿಕೇರಿ, ಫೆ. 25: ಜಿಲ್ಲೆಯಾದ್ಯಂತ ಶುಕ್ರವಾರ ಶಿವನಾಮ ಸ್ಮರಣೆ... ಶಿವನ ಜಪವನ್ನು ಶ್ರದ್ಧಾಭಕ್ತಿಯಿಂದ ಮಾಡಲಾಯಿತು. ಜಿಲ್ಲೆಯ ವಿವಿಧ ಶಿವ ದೇವಾಲಯವನ್ನು ವಿಶೇಷವಾಗಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಶಿವ ದೇವಾಲಯಗಳಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದು ಅಪಾರ ಭಕ್ತಾದಿಗಳು ಶಿವನಾಮವನ್ನು ಸ್ಮರಣೆ ಮಾಡಿ ಪುನೀತರಾದರು.ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ಜರುಗಿದವು. ದೇವಾಲಯ ಆವರಣದಲ್ಲಿ ರುದ್ರಹೋಮ, ಮಹಾ ಮಂಗಳಾರತಿ, ಬಿಲ್ವ ಪತ್ರ ಅರ್ಚನೆ ಸೇವೆಗಳು ಜರುಗಿದವು. ಬೆಳಿಗ್ಗೆಯಿಂದ ರಾತ್ರಿ ತನಕವು ಭಕ್ತಾದಿಗಳ ದಂಡು ಕಂಡುಬಂದಿತು. ಮಧ್ಯಾಹ್ನ ಪ್ರಸಾದ ವಿನಿಯೋಗ ನಡೆಯಿತು.

ರಾತ್ರಿ ದೇಗುಲದಲ್ಲಿ ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಬಳಿಕ ದೇಗುಲ ಆವರಣದಲ್ಲಿ ಶಿವಭಕ್ತ ವೀರಮಣಿ ಯಕ್ಷಗಾನ ಪ್ರಸಂಗ ನಡೆಯಿತು. ಪೂಜಾ ಕೈಂಕರ್ಯಗಳು ದೇವಾಲಯ ಪ್ರಧಾನ ಅರ್ಚಕರಾದ ನಾರಾಯಣ ಭಟ್ ನೇತೃತ್ವದಲ್ಲಿ ಜರುಗಿತು.