ಸೋಮವಾರಪೇಟೆ,ಫೆ.28: ರಸ್ತೆಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಗಾಯಗೊಂಡ ಗಾಯಾಳುವಿನ ನೆರವಿಗೆ ಕೇಂದ್ರ ಸಚಿವ, ಮಾಜೀ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಧಾವಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ ಘಟನೆ ನಡೆಯಿತು.

ನಿನ್ನೆ ದಿನ ಸಮೀಪದ ಗೌಡಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಶನಿವಾರಸಂತೆ ಮಾರ್ಗವಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರು ಆಗಮಿಸುತ್ತಿದ್ದರು. ಈ ಸಂದರ್ಭ ಶನಿವಾರಸಂತೆ ಸರ್ಕಾರಿ ಆಸ್ಪತ್ರೆಯ ತಿರುವಿನಲ್ಲಿ ಮಾರುತಿ ಓಮ್ನಿ ಕಾರೊಂದು ಎದುರು ಭಾಗದಲ್ಲಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಯಿತು.

ಅಪಘಾತದಿಂದ ಬೈಕ್‍ನಿಂದ ಕೆಳಬಿದ್ದ ಚಾಲಕ, ಹಾಸನದ ಸತೀಶ್ ಎಂಬವರಿಗೆ ಸಣ್ಣಪುಟ್ಟ ಗಾಯ ಗಳಾಯಿತು. ಇದನ್ನು ಪ್ರತ್ಯಕ್ಷ ಕಂಡ ಸಚಿವರು ತಕ್ಷಣ ತಮ್ಮ ಕಾರಿನಿಂದಿಳಿದು ಗಾಯಾಳುವಿನ ನೆರವಿಗೆ ಧಾವಿಸಿದರು. ಇವರೊಂದಿಗಿದ್ದ ಮಾಜೀ ಎಂಎಲ್‍ಸಿ ಎಸ್.ಜಿ. ಮೇದಪ್ಪ, ವಿಶ್ವ ಒಕ್ಕಲಿಗ ಬ್ರಿಗೇಡ್‍ನ ರಾಜ್ಯಾಧ್ಯಕ್ಷ ಗಿರೀಶ್ ಮಲ್ಲಪ್ಪ ಅವರುಗಳು ಗಾಯಾಳುವನ್ನು ಉಪಚರಿಸಿ, ಸ್ಥಳೀಯರ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ನೆರವಾದರು.