ಮಡಿಕೇರಿ ನಗರದ ಪ್ರಮುಖ ಭಾಗದಲ್ಲಿ 10 ಸೆಂಟ್ ಜಾಗದ ಮಾಲೀಕತ್ವದ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ವಿವಾದವಿದ್ದು, ಇದು ನ್ಯಾಯಾಲಯದ ಮೆಟ್ಟಿಲೇರಿತ್ತು. 1999ರಲ್ಲಿ ಈ ಜಾಗವು ಜೆಡಿಎಸ್‍ಗೆ ಸೇರಿದ್ದಾಗಿ ನ್ಯಾಯಾಲಯದಲ್ಲಿ ತೀರ್ಪು ಹೊರ ಬಿದ್ದಿತ್ತು. ಇದರ ವಿರುದ್ಧ 2012ರಲ್ಲಿ ಕಾಂಗ್ರೆಸ್ ಪರವಾಗಿ ವಕೀಲರುಗಳಾದ ಸಿ.ಟಿ. ಮುತ್ತಪ್ಪ ಮತ್ತು ಎಂ. ಶ್ರೀಧರ್ ನಾಯರ್, ಹಿರಿಯ ಸಿವಿಲ್ ನ್ಯಾಯಾಲದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಜಿಲ್ಲಾ ಕೇಂದ್ರ ಬ್ಯಾಂಕ್ ಸನಿಹದಲ್ಲಿರುವ ಈ ನಿವೇಶನವು ಕಾಂಗ್ರೆಸ್‍ಗೆ ಸೇರಿದ್ದಾಗಿ ವಕೀಲರುಗಳು ವಾದ ಮಂಡಿಸಿದ್ದರು. ಇತ್ತೀಚೆಗೆ ಬೆಂಗಳೂರಿನಲ್ಲಿ ಜೆಡಿಎಸ್ ಸ್ವಾಧಿನದಲ್ಲಿದ್ದ ಕಟ್ಟಡ ಮತ್ತು ನಿವೇಶನ ಕಾಂಗ್ರೆಸ್‍ಗೆ ಕಾನೂನು ಪ್ರಕಾರ ಲಭಿಸಿರುವ ಕುರಿತು ಉಲ್ಲೇಖಿಸಲಾಗಿತ್ತು.

ವಾದ ವಿವಾದ ಆಲಿಸಿದ ನ್ಯಾಯಾಧೀಶರಾದ ಶ್ರೀಕಾಂತ್ ಅವರು ನಿವೇಶನವು ಕಾಂಗ್ರೆಸ್ ಮಾಲೀಕತ್ವಕ್ಕೆ ಸೇರಿರುವದಾಗಿ ಇಂದು ತೀರ್ಪು ನೀಡಿದ್ದಾರೆ.