ಪೊನ್ನಂಪೇಟೆ, ಮಾ. 1: ಪಕ್ಷದಲ್ಲಿ ನಾಯಕರು ಬದಲಾದರೂ ಕಾಂಗ್ರೆಸ್ ಕಾರ್ಯಕರ್ತರು ಎಂದಿಗೂ ಬದಲಾಗಿಲ್ಲ. ನಿಷ್ಠೆ, ಪ್ರಮಾಣಿಕತೆ ಬದ್ಧತೆಯಿಂದ ಯಾವದೇ ಪಲಾಪೇಕ್ಷೆ ಇಲ್ಲದೆ ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರೇ ಪಕ್ಷದ ಜೀವಾಳ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿರಿಯ ಉಪಾಧ್ಯಕ್ಷ ವಿ.ಕೆ. ಪೋಕುಟ್ಟಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲ, ಭಿನ್ನಾಭಿಪ್ರಾಯ ಸಾಮಾನ್ಯವಾಗಿರುತ್ತದೆ.

ಕೆಲವೆಡೆ ಪಕ್ಷದ ಕಾರ್ಯಕರ್ತರ ಮನಸ್ಸಿಗೆ ನೋವಾಗಿದ್ದು ನಿಜ. ಇದಕ್ಕಾಗಿ ಪಕ್ಷವನ್ನು ದೂರುವ ಅಗತ್ಯವಿಲ್ಲ. ಗೊಂದಲ ಮತ್ತು ಭಿನ್ನಾಭಿಪ್ರಾಯಗಳಿಂದಾಗಿ ಕಾಂಗ್ರೆಸ್‍ನ ಮತ ಹರಿದು ಹಂಚಿ ಹೋಗದಂತೆ ನೋಡಿಕೊಳ್ಳುವ ಮಹತ್ತರವಾದ ಹೊಣೆಗಾರಿಕೆಯ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಜನಪರ ಮತ್ತು ಕ್ರಾಂತಿಕಾರಕ ಯೋಜನೆಗಳ ಪ್ರಯೋಜನಗಳ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿಯೂ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ ಎಂದರಲ್ಲದೇ, ಅದೇ ರೀತಿ ಕಾರ್ಯಕರ್ತರ ಭಾವನೆಗೂ ನಾಯಕರುಗಳು ಬೆಲೆ ನೀಡುವಂತಾಗಬೇಕು ಎಂದು ಪೋಕುಟ್ಟಿ ಅಭಿಪ್ರಾಯಪಟ್ಟಿದ್ದಾರೆ.