ಗೋಣಿಕೊಪ್ಪಲು, ಮಾ. 2: ಕೊಡಗು ಹೆಗ್ಗಡೆ ಸಮಾಜದ 16ನೇ ವರ್ಷದ ಕ್ರೀಡಾಕೂಟ ಏಪ್ರಿಲ್ 29ರಿಂದ ಮೂರು ದಿನಗಳ ಕಾಲ ವೀರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಹೆಗ್ಗಡೆ ಸಮಾಜ ಅಧ್ಯಕ್ಷ ಪಡಿಂಞರಂಡ ಅಯ್ಯಪ್ಪ ಅಧ್ಯಕ್ಷತೆ ಯಲ್ಲಿ ಸಮಾಜದ ಸಭಾಂಗಣದಲ್ಲಿ ನಡೆದ ಕ್ರೀಡಾಕೂಟ ಸಮಿತಿ ಸಭೆಯಲ್ಲಿ ಈ ನಿರ್ಧಾರ ವನ್ನು ತೆಗೆದುಕೊಳ್ಳ ಲಾಯಿತು. ಮೇ 1 ರಂದು ಅಂತಿಮ ಪಂದ್ಯಾಟ ನಡೆಸಲು ನಿರ್ಧರಿಸಲಾಯಿತು. ಪುರುಷರ ವಿಭಾಗದಲ್ಲಿ ಹಿರಿಯರು ಹಾಗೂ ಕಿರಿಯರಿಗೆ ಪ್ರತ್ಯೇಕ ಕ್ರಿಕೆಟ್ ಪಂದ್ಯಾವಳಿ, ಮಹಿಳೆಯರಿಗೆ ಥ್ರೋಬಾಲ್ ಕ್ರೀಡೆ ನಡೆಸುವಂತೆ ನಿರ್ಧರಿಸಲಾಯಿತು. ಸಮಾಜದ ಕಾರ್ಯದರ್ಶಿ ಕಟ್ಟಿ ಕಾವೇರಪ್ಪ, ಉಪಾಧ್ಯಕ್ಷ ಕೊರಕುಟ್ಟೀರ ಸರಾ ಚೆಂಗಪ್ಪ, ಸ್ಪೋಟ್ಸ್ ಕಮಿಟಿ ಅಧ್ಯಕ್ಷ ಪಡಿಂಞರಂಡ ಪ್ರಭುಕುಮಾರ್, ಯೂತ್ ಅಸೋಸಿಯೇಷನ್ ಸಂಚಾಲಕ ಪಿ.ಎನ್. ದಿಲ್ಲು ಉಪಸ್ಥಿತರಿದ್ದರು.