ಕುಶಾಲನಗರ, ಮಾ. 7: ಕಾಂಗ್ರೆಸ್ ಪಕ್ಷದ ಪ್ರಮುಖರು ತಮ್ಮ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ವೇದನೆಯನ್ನು ನಿವಾರಿಸಿ ನಂತರ ಜನರ ವೇದನೆಯ ಬಗ್ಗೆ ಚಿಂತನೆ ಹರಿಸಲಿ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಕುಟುಕು ನುಡಿಯಾಡಿದ್ದಾರೆ. ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರಕಾರ ಪ್ರಧಾನಮಂತ್ರಿ ಮೋದಿ ನೇತೃತ್ವದಲ್ಲಿ ಜನಪರ ಹಾಗೂ ದೇಶದ ಹಿತ ಕಾಯುವ ಕಾರ್ಯ ಯೋಜನೆಗಳನ್ನು ನಡೆಸುತ್ತಿರುವ ಸಂದರ್ಭ ಜನರಲ್ಲಿ ಗೊಂದಲ ಮೂಡಿಸುತ್ತಿರುವ ಕಾಂಗ್ರೆಸ್ ಪಕ್ಷ ತನ್ನ ಪಕ್ಷದ ಮುಖಂಡರ ವೇದನೆಯನ್ನು ನಿವಾರಿಸಲಿ ಎಂದು ಸಲಹೆ ಮಾಡಿದ್ದಾರೆ.

ಕುಶಾಲನಗರದಲ್ಲಿ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಜನ ವೇದನಾ ಕಾರ್ಯಕ್ರಮ ಸಂಬಂಧ ಪ್ರತಿಕ್ರಿಯಿಸಿರುವ ಅವರು, ಜನಪರ ಕಾರ್ಯಕ್ರಮಗಳನ್ನು ನೀಡುತ್ತಿರುವ ಕೇಂದ್ರ ಸರಕಾರದ ಯೋಜನೆಗಳ ವಿರುದ್ಧ ಜನರ ನಡುವೆ ವಿನಾಕಾರಣ ಗೊಂದಲ ಉಂಟು ಮಾಡುತ್ತಿರುವದನ್ನು ನಿಲ್ಲಿಸಬೇಕಾಗಿದೆ ಎಂದಿದ್ದಾರೆ.